ADVERTISEMENT

ದನದ ದೊಡ್ಡಿಯಲ್ಲಿ ರೌಡಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 19:41 IST
Last Updated 6 ಜುಲೈ 2017, 19:41 IST

ಬೆಂಗಳೂರು: ಫ್ರೇಜರ್‌ಟೌನ್ ಸಮೀಪದ ರಾಬರ್ಟ್‌ಸನ್‌ ರಸ್ತೆಯಲ್ಲಿರುವ ಬಿಬಿಎಂಪಿ ದನದ ದೊಡ್ಡಿಯಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳು ರಂಜಿತ್ (28) ಎಂಬ ರೌಡಿಯನ್ನು ಮಚ್ಚು–ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. 

ರಾತ್ರಿ 11.30ರ ಸುಮಾರಿಗೆ ಹತ್ಯೆ ನಡೆದಿದ್ದು, ದ್ವೇಷದ ಕಾರಣಕ್ಕೆ ಬಾಣಸವಾಡಿಯ ರಮೇಶ್ ಹಾಗೂ ಆತನ ಸಹಚರರು ಈ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತ ರಂಜಿತ್, ಮೊದಲು ಪೋಷಕರ ಜತೆ ನಂಜಪ್ಪ ಗಾರ್ಡನ್‌ ಸಮೀಪದ ಹೇನ್ಸ್ ರಸ್ತೆಯಲ್ಲಿ ನೆಲೆಸಿದ್ದ. ಕೆಲ ದಿನಗಳ ಹಿಂದೆ ಆತನ ತಾಯಿ ನಿಧನರಾದರು. ಆ ನಂತರ ಇನ್ನೊಂದು ಮದುವೆಯಾದ ಆತನ ಅಪ್ಪ, 2ನೇ ಪತ್ನಿ ಜತೆ ವಾಸ್ತವ್ಯವನ್ನು ಲಿಂಗರಾಜಪುರಕ್ಕೆ ಬದಲಾಯಿಸಿದರು. ಹೀಗಾಗಿ, ಹೇನ್ಸ್ ರಸ್ತೆಯ ಮನೆಯಲ್ಲಿ ರಂಜಿತ್ ಒಬ್ಬನೇ ವಾಸವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಇತ್ತೀಚೆಗೆ ಅಪ್ಪ ಆ ಮನೆಯನ್ನೂ ಬೇರೆಯವರಿಗೆ ಬಾಡಿಗೆ ಕೊಟ್ಟರು. ಇದೇ ಬೇಸರದಲ್ಲಿ ಅವರ ಜತೆಗಿನ ಸಂಪರ್ಕ ಕಡಿತ ಮಾಡಿದ ರಂಜಿತ್, ದನದ ದೊಡ್ಡಿಯಲ್ಲೇ ಮಲಗುತ್ತಿದ್ದ. ಬುಧವಾರ ರಾತ್ರಿ 11.30ರ ಸುಮಾರಿಗೆ ದೊಡ್ಡಿಯಲ್ಲಿ ಊಟ ಮಾಡುತ್ತಿದ್ದಾಗ ಹಂತಕರ ಗ್ಯಾಂಗ್ ದಾಳಿ ನಡೆಸಿದೆ. ಆತನ ಚೀರಾಟ ಕೇಳಿ ಸ್ಥಳೀಯರು ಅಲ್ಲಿಗೆ ಹೋಗುವಷ್ಟರಲ್ಲಿ ರಂಜಿತ್ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಐದಾರು ವರ್ಷಗಳಿಂದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ರಂಜಿತ್‌ನ ಹೆಸರನ್ನು 2015ರಲ್ಲಿ ಫ್ರೇಜರ್‌ಟೌನ್‌ ಠಾಣೆಯ ರೌಡಿಪಟ್ಟಿಯಲ್ಲಿ ಸೇರಿಸಲಾಗಿತ್ತು. ಕೊಲೆ ಯತ್ನ, ಸುಲಿಗೆ, ಹಲ್ಲೆ ಸೇರಿದಂತೆ ಆತನ ವಿರುದ್ಧ ಬಾಣಸವಾಡಿ ಹಾಗೂ ಫ್ರೇಜರ್‌ಟೌನ್ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು ಪೊಲೀಸರು ಮಾಹಿತಿ ನೀಡಿದ್ದಾರೆ.

***

ಹುಡುಗಿ ಗಲಾಟೆ
‘2016ರಲ್ಲಿ ಬಾಣಸವಾಡಿಯ ರಮೇಶ ನಮ್ಮ ಸಂಬಂಧಿಕರ ಪುತ್ರಿಯನ್ನು ಚುಡಾಯಿಸಿದ್ದ. ಈ ಕಾರಣಕ್ಕೆ ಆತನ ಮೇಲೆ ರಂಜಿತ್ ಹಲ್ಲೆ ಮಾಡಿದ್ದ. ಅದಕ್ಕೆ ಪ್ರತೀಕಾರವಾಗಿ ರಮೇಶ್‌ನೇ ಸಹಚರರ ಜತೆ ಸೇರಿ ಮಗನನ್ನು ಕೊಂದಿದ್ದಾನೆ’ ಎಂದು ಆರೋಪಿಸಿ ಮೃತನ ತಂದೆ ದೂರು ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.