ಬೆಂಗಳೂರು: ಬೆಸ್ಕಾಂ 24x7 ಸಹಾಯವಾಣಿಗೆ (1912) ದೂರು ನೀಡಿದ 35 ನಿಮಿಷಗಳಲ್ಲೇ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು. ಬೆಸ್ಕಾಂ ಕೇಂದ್ರ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಸಹಾಯವಾಣಿಯ ಕಾರ್ಯವೈಖರಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಹಾಯವಾಣಿಯಲ್ಲಿ ಪ್ರತಿ ಪಾಳಿಯಲ್ಲಿ 45 ಮಂದಿಯಂತೆ ಮೂರು ಪಾಳಿಯಲ್ಲಿ 150 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ 30 ಮಂದಿ ಹಾಗೂ ರಾಜಾಜಿನಗರದ ಕಚೇರಿಯಲ್ಲಿ 15 ಮಂದಿ ಸಿಬ್ಬಂದಿ ಇದ್ದಾರೆ. ಗ್ರಾಹಕರು ಕರೆ ಮಾಡಿ ದೂರು ಸಲ್ಲಿಸಬಹುದು ಅಥವಾ ಎಸ್ಎಂಎಸ್ ಮೂಲಕವೂ ದೂರು ಸಲ್ಲಿಸಬಹುದು ಎಂದು ಅವರು ಹೇಳಿದರು.
‘ಕಳೆದ ಐದು ವರ್ಷಗಳಲ್ಲಿ ದೂರುಗಳ ಇತ್ಯರ್ಥ ದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ. 2010ರಲ್ಲಿ ದೂರು ಇತ್ಯರ್ಥಕ್ಕೆ 91 ನಿಮಿಷ ತೆಗೆದುಕೊಳ್ಳಲಾಗುತ್ತಿತ್ತು. ಈ ವರ್ಷ 35 ನಿಮಿಷದಲ್ಲೇ ಇತ್ಯರ್ಥ ಮಾಡಲಾಗುತ್ತಿದೆ. ಈ ವರ್ಷ ಗ್ರಾಹಕರ ದೂರುಗಳ ಸಂಖ್ಯೆ 10 ಲಕ್ಷ ದಾಟುವ ನಿರೀಕ್ಷೆ ಇದೆ’ ಎಂದರು.
‘ಇನ್ಪೊಸಿಸ್ನಿಂದ ಮರ್ಯಾದೆ ಹಾಳು’
ಸುಲಭದಲ್ಲಿ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಗೆ ನೆರವಾ ಗಲು ಇನ್ಪೊಸಿಸ್ನ ಮಾಹಿತಿ ತಂತ್ರಜ್ಞಾನದ ನೆರವು ಪಡೆಯಲಾಗಿತ್ತು. ಸಂಸ್ಥೆ ನಿಧಾನಗತಿ ಸೇವೆಯಿಂದ ಬೆಸ್ಕಾಂನ ಮರ್ಯಾದೆ ಹಾಳಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಸಮಸ್ಯೆಯನ್ನು ತ್ವರಿತಗತಿಯಲ್ಲಿ ಪರಿಹರಿಸುವಂತೆ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. 2 ತಿಂಗಳಿಂದ ಸಮಸ್ಯೆ ಸ್ವಲ್ಪ ಪರಿಹಾರ ಆಗಿದೆ. ಈ ವರ್ಷದ ಅಂತ್ಯಕ್ಕೆ ಸಂಸ್ಥೆಯ ಜತೆಗಿನ ಒಪ್ಪಂದ ಕೊನೆಗೊಳ್ಳಲಿದೆ. ಮುಂದಿನ ವರ್ಷ ಟೆಂಡರ್ ಕರೆದು ಬೇರೆ ಸಂಸ್ಥೆಗೆ ಗುತ್ತಿಗೆ ನೀಡಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.