ADVERTISEMENT

ನಕಲಿ ಜ್ಯೋತಿಷಿ ಸುಳಿವು ನೀಡಿದ್ದು ‘ಯೂಟ್ಯೂಬ್‌’

ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:35 IST
Last Updated 22 ಮೇ 2017, 19:35 IST
– ಸಾಂದರ್ಭಿಕ ಚಿತ್ರ
– ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಮಗನ ಮೂರ್ಛೆ ರೋಗ ಗುಣವಾಗುತ್ತದೆ’ ಎಂದು ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ನಕಲಿ ಜ್ಯೋತಿಷಿ ಪ್ರಸನ್ನಕುಮಾರ್ ಅಲಿಯಾಸ್ ಕಾರ್ತಿಕ್ (31) ಬಂಧನಕ್ಕೆ ‘ಯೂಟ್ಯೂಬ್‌’ ಸುಳಿವು ನೀಡಿತ್ತು.

‘ಏಳು ಬಾರಿ ಲೈಂಗಿಕ ಕ್ರಿಯೆ ನಡೆಸಿ ₹ 20.7 ಲಕ್ಷ ಹಾಗೂ 300 ಗ್ರಾಂ ಚಿನ್ನಾಭರಣವನ್ನು  ಜ್ಯೋತಿಷಿ ತೆಗೆದುಕೊಂಡು ಹೋಗಿದ್ದಾನೆ’ ಎಂದು ಮಹಿಳೆಯು ದೂರು ಕೊಟ್ಟಿದ್ದರು.

ಆದರೆ, ಆರೋಪಿಯ ಭಾವಚಿತ್ರ ಹಾಗೂ ಆತನ ನಿಖರ ವಿಳಾಸದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅವಾಗಲೇ ಪೊಲೀಸರು ನಗರದಲ್ಲಿರುವ ಜ್ಯೋತಿಷಿಗಳ ಬಗ್ಗೆ ಮಾಹಿತಿ ಕಲೆಹಾಕಲು ಆರಂಭಿಸಿದ್ದರು.

‘ಮಹಾಲಕ್ಷ್ಮೀ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ಕಳೆದ ತಿಂಗಳು ನಕಲಿ ಜ್ಯೋತಿಷಿಯೊಬ್ಬರನ್ನು ಹಿಡಿದು ಮಹಿಳೆಯರೇ ಥಳಿಸಿದ್ದರು. ಅದರ ವಿಡಿಯೊವನ್ನು ‘ಯ್ಯೂಟ್ಯೂಬ್‌’ನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಅದನ್ನು ಸಂತ್ರಸ್ತ ಮಹಿಳೆಗೆ ತೋರಿಸಿದೆವು. ಅದರಲ್ಲಿದ್ದ ಜ್ಯೋತಿಷಿಯೇ ಆರೋಪಿ ಎಂದು ಮಹಿಳೆ ಗುರುತು ಹಿಡಿದರು’ ಎಂದು ತನಿಖಾಧಿಕಾರಿ ತಿಳಿಸಿದರು.

‘ಆರೋಪಿಯು ಹಲವು ಜನರನ್ನು ವಂಚಿಸಿದ್ದಾನೆ. ಆತನ ಸ್ನೇಹಿತರಲ್ಲಿ ಹಲವರು ನಕಲಿ ಜ್ಯೋತಿಷಿಗಳಿದ್ದಾರೆ. ಜನರನ್ನು ವಂಚಿಸಿ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವರ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು  ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT