ಬೆಂಗಳೂರು: ‘ದೇವನಹಳ್ಳಿ ಬಳಿ ಭಾನುವಾರ ರಾತ್ರಿ ನಿಗೂಢವಾಗಿ ಮೃತಪಟ್ಟಿದ್ದ ನೈಜೀರಿಯನ್ ಪ್ರಜೆ ಇಫಾಯಿ ಮಡೂ (28) ಅವರದ್ದು ಕೊಲೆ’ ಎಂದು ಆರೋಪಿಸಿರುವ ಆಫ್ರಿಕಾ ಸಮುದಾಯದ ಸದಸ್ಯರು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
‘ಈ ಘಟನೆಯ ಕುರಿತು ದೆಹಲಿಯ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದೇವೆ. ಅಲ್ಲಿನ ಅಧಿಕಾರಿಗಳು ಈ ಪತ್ರವನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ರವಾನಿಸಿದ್ದಾರೆ. ಆಫ್ರಿಕಾದ ರಾಯಭಾರಿ ಕಚೇರಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಆಫ್ರಿಕಾದ ವಿದ್ಯಾರ್ಥಿಗಳ ಸಂಘದ ಕಾನೂನು ಸಲಹೆಗಾರ ಬಾಸ್ಕೊ ಕಾವೀಸಿ ತಿಳಿಸಿದರು.
‘ಭಾನುವಾರ ರಾತ್ರಿ 10ರ ಸುಮಾರಿಗೆ ಕೊತ್ತನೂರಿನ ಅವಲಹಳ್ಳಿ ರಸ್ತೆಯ ಬಳಿ ಇಫಾಯಿ ಹಾಗೂ ಆತನ ಸ್ನೇಹಿತನನ್ನು ಸಿಸಿಬಿ ಪೊಲೀಸರು ಅಟ್ಟಿಸಿಕೊಂಡು ಹೋಗಿದ್ದಾರೆ. ಈ ವೇಳೆ ಇಫಾಯಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆಗ ಆತನನ್ನು ಮನಬಂದಂತೆ ಥಳಿಸಿದ್ದಾರೆ. ಈ ಬಗ್ಗೆ ಪ್ರತ್ಯಕ್ಷದರ್ಶಿಯಾಗಿದ್ದ ಇಫಾಯಿ ಸ್ನೇಹಿತ ಹೇಳಿಕೆ ನೀಡಿದ್ದಾನೆ’ ಎಂದು ಆಫ್ರಿಕನ್ ಸಮುದಾಯದವರು ತಿಳಿಸಿದ್ದಾರೆ.
‘ಆದರೆ, ಪ್ರಕರಣ ಸಂಬಂಧ ಪೊಲೀಸರು ಅಪಘಾತದ ಕಥೆ ಕಟ್ಟಿದ್ದಾರೆ. ಇದನ್ನು ನಾವು ನಂಬುವುದಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಘಟನೆ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಇಫಾಯಿ ಬಗ್ಗೆ ಆತನ ಹೆಸರು ಹಾಗೂ ರಾಷ್ಟ್ರೀಯತೆ ಹೊರತು ಬೇರೆ ಮಾಹಿತಿ ಲಭ್ಯವಾಗಿಲ್ಲ. ಅತನ ಪಾಸ್ಪೋರ್ಟ್ ಹಾಗೂ ವೀಸಾ ಮಾಹಿತಿ ನೀಡುವಂತೆ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್ಆರ್ಆರ್ಒ) ಮನವಿ ಮಾಡಿದ್ದೇವೆ’ ಎಂದು ಉತ್ತರ ವಿಭಾಗದ ಡಿಸಿಪಿಯೊಬ್ಬರು (ಸಂಚಾರ) ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.