ಬೆಂಗಳೂರು: ಸರ್ಜಾಪುರ ರಿಂಗ್ ರಸ್ತೆಯಲ್ಲಿ ಗುರುವಾರ ಕರ್ತವ್ಯ ನಿರತರಾಗಿದ್ದ ಸಂಚಾರ ಕಾನ್ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ದಿನೇಶ್ ಪರಿಹಾರ್ (30) ಎಂಬುವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಎಚ್ಎಸ್ಆರ್ ಸಂಚಾರ ಠಾಣೆಯ ಭೀಮಾಶಂಕರ್ ಹಲ್ಲೆಗೊಳಗಾದವರು. ಪೀಠೋಪಕರಣಗಳ ವ್ಯಾಪಾರಿಯಾದ ದಿನೇಶ್ ರಸ್ತೆ ಮಧ್ಯದಲ್ಲಿ ಕಾರು (ನೋಂದಣಿ ಸಂಖ್ಯೆ ಕೆ.ಎ–01 ಎಂ.ಎಲ್.5744) ನಿಲ್ಲಿಸಿಕೊಂಡು ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಇದರಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಅದೇ ವೇಳೆ ಅಲ್ಲಿಗೆ ಬಂದ ಭೀಮಶಂಕರ್, ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ ದಿನೇಶ್ ಸೂಚಿಸಿದ್ದರು.
ಅಷ್ಟಕ್ಕೆ ಸಿಟ್ಟಿಗೆದ್ದ ಆರೋಪಿ, ಕಾನ್ಸ್ಟೆಬಲ್ ಜತೆ ವಾಗ್ವಾದಕ್ಕಿಳಿದಿದ್ದರು. ಕಾರಿನಲ್ಲಿದ್ದ ರಾಡಿನಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬಳಿಕ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದರು. ಈ ದೃಶ್ಯವನ್ನು ಸಾರ್ವಜನಿಕರೊಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.