ADVERTISEMENT

ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ

ಕೆಲವೇ ತಾಸುಗಳಲ್ಲಿ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2014, 19:59 IST
Last Updated 31 ಆಗಸ್ಟ್ 2014, 19:59 IST

ಬೆಂಗಳೂರು: ಬಾಲಕನನ್ನು ಅಪಹರಿ­ಸಿದ್ದ ಆರೋಪಿಗಳನ್ನು ಕೆಲವೇ ತಾಸು­ಗಳಲ್ಲಿ ಬಂಧಿಸಿರುವ ಮಹದೇವಪುರ ಪೊಲೀಸರು ಪ್ರಕರಣವನ್ನು ಸುಖಾಂತ್ಯ­ಗೊಳಿಸಿದ್ದಾರೆ.

ಕೆ.ಆರ್‌.ಪುರ ಬಳಿಯ ಗರುಡಾ­ಚಾರ್‌ ಪಾಳ್ಯದ ಮಂಜುನಾಥ್‌ (30) ಮತ್ತು ಆತನ ಸ್ನೇಹಿತ ಕಾವೇರಿನಗರದ ಮಧು (26) ಬಂಧಿತರು.
ಆರೋಪಿಗಳು ಕಾವೇರಿನಗರ ನಿವಾಸಿ ಗೀತಾ ಎಂಬುವರ ನಾಲ್ಕು ವರ್ಷದ ಮಗ ನಿತಿನ್‌ ಎಂಬಾತನನ್ನು ಅಪಹರಿ­ಸಿದ್ದರು ಎಂದು ಪೊಲೀಸರು ತಿಳಿಸಿ ದ್ದಾರೆ.

ಮಂಜುನಾಥ್‌ ತೋಟಗಾರಿಕೆ ಇಲಾಖೆ ನೌಕರನಾಗಿದ್ದು, ಆತನ ಮನೆಯ ಸಮೀಪವೇ ಗೀತಾ ಅವರ ಅಣ್ಣ ಬಾಲಕೃಷ್ಣ ಅವರು ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ. ಬಾಲಕೃಷ್ಣ, ಮಂಜುನಾಥ್‌ನ ಪತ್ನಿಯ ಜತೆ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ತಿಳಿದು ಕೋಪಗೊಂಡಿದ್ದ ಆತ ಪತ್ನಿ ಯನ್ನು ಥಳಿಸಿ ತವರುಮನೆಗೆ ಕಳುಹಿ ಸಿದ್ದ. ಅಲ್ಲದೆ, ಮಧು ಜತೆ ಸೇರಿ ಬಾಲ­ಕೃಷ್ಣ ಅವರನ್ನು ಕೊಲೆ ಮಾಡಲೂ ಹೊಂಚು ಹಾಕುತ್ತಿದ್ದ. ಆದರೆ, ಅವರು ತಲೆಮರೆಸಿ­ಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಹೀಗಾಗಿ ಗೀತಾ, ಅವರ ಮಕ್ಕಳನ್ನು ಅಪಹರಿಸಿ ಒತ್ತೆಯಾಳಾಗಿ ಇಟ್ಟು ಕೊಂಡರೆ ಅವರನ್ನು ಬಿಡಿಸಿಕೊಂಡು ಹೋಗಲು ಬಾಲಕೃಷ್ಣ ಬರುತ್ತಾರೆ. ಆಗ ಅವರನ್ನು ಕೊಲೆ ಮಾಡಬಹು ದೆಂದು ಆರೋಪಿಗಳು ಸಂಚು ರೂಪಿ ಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಪಹರಣಕ್ಕೆ ಅಪಘಾತದ ನಾಟಕ
ಪೂರ್ವಯೋಜಿತ ಸಂಚಿನಂತೆ ಆರೋ ಪಿಗಳು ಶನಿವಾರ ರಾತ್ರಿ ಗೀತಾ ಅವರ ಮನೆಗೆ ಹೋಗಿ, ‘ಬಾಲಕೃಷ್ಣ ಅವರಿಗೆ ಅಪಘಾತವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಜತೆಯಲ್ಲಿ ಬಂದರೆ ಆಸ್ಪತ್ರೆಗೆ ಕರೆದೊಯ್ಯುತ್ತೇವೆ’ ಎಂದು ಸುಳ್ಳು ಹೇಳಿದ್ದರು. ಇದರಿಂದ ಆತಂಕಗೊಂಡ ಗೀತಾ, ಸಂಬಂಧಿಕರನ್ನು ಆಸ್ಪತ್ರೆಗೆ ಕಳುಹಿ ಸುತ್ತೇನೆ ಎಂದು ಹೇಳಿ ಸಮೀಪದ ಸಂಬಂಧಿಕರ ಮನೆಗೆ ಆರೋಪಿಗಳನ್ನು ಜತೆಯಲ್ಲೇ ಕರೆದೊಯ್ದಿದ್ದರು.

ADVERTISEMENT

ಆಘಾತ ಗೊಂಡಿದ್ದ ಅವರು ಮಗ ನಿತಿನ್‌ನನ್ನು ಆಟೊದಲ್ಲೇ ಬಿಟ್ಟು ಎಂಟು ತಿಂಗಳ ಮಗುವನ್ನು ಮಾತ್ರ ಎತ್ತಿಕೊಂಡು ಸಂಬಂಧಿಕರ ಮನೆ­ಯೊಳಗೆ ಹೋಗಿದ್ದರು. ನಂತರ ಅವರು ಮನೆಯಿಂದ ಹೊರ ಬರುವಷ್ಟರಲ್ಲಿ ಆರೋಪಿಗಳು ನಿತಿನ್‌ನನ್ನು ಆಟೊ­ದಲ್ಲಿ ಅಪಹರಿ ಸಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಂಜುನಾಥ್‌, ಬಾಲಕನನ್ನು ಕೋಲಾರ ಜಿಲ್ಲೆ ಬೂದಿಕೋಟೆ ಗ್ರಾಮ ದಲ್ಲಿನ ಪತ್ನಿಯ ತವರು ಮನೆಗೆ ಎಳೆ ದೊಯ್ದಿದ್ದ. ಬಳಿಕ ಆತನ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಭಾನುವಾರ ಬೆಳಿಗ್ಗೆ ಬೂದಿಕೋಟೆಗೆ ತೆರಳಿದ ಸಿಬ್ಬಂದಿ, ಆರೋಪಿಯನ್ನು ಬಂಧಿಸಿ ಬಾಲಕನನ್ನು ರಕ್ಷಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.