ADVERTISEMENT

ಬಾಲಕಿ ಶವ ಪತ್ತೆ ಪ್ರಕರಣ ಯಾದಗಿರಿಗೆ ಪೊಲೀಸರ ತಂಡ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:40 IST
Last Updated 24 ಏಪ್ರಿಲ್ 2017, 19:40 IST

ಬೆಂಗಳೂರು: ಗಿರಿನಗರದಲ್ಲಿ ಭಾನುವಾರ ರಾತ್ರಿ ಆರು ವರ್ಷದ ಬಾಲಕಿಯ ಶವ ಪತ್ತೆಯಾದ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರ ವಿಶೇಷ ತಂಡವು, ಆರೋಪಿ ಅನಿಲ್‌ನ ಬಗ್ಗೆ ಮಾಹಿತಿ ಕಲೆಹಾಕಲು ಯಾದಗಿರಿಗೆ ಹೋಗಿದೆ.

‘ಅನಿಲ್‌ನ ಮನೆಯ ಪೆಟ್ಟಿಗೆಯಲ್ಲಿ ಶವ ಪತ್ತೆಯಾಗಿರುವುದರಿಂದ ಆತನೇ ಬಾಲಕಿಯನ್ನು ಕೊಂದಿರಬಹುದು ಎಂದು ಪೋಷಕರು ಹೇಳುತ್ತಿದ್ದಾರೆ. ಆತನೇ ಆರೋಪಿ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಲಕಿ ನಾಪತ್ತೆಯಾದ ದಿನ (ಏ. 20) ಪೋಷಕರು ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದರು. ಆಗ ಆತ ಮನೆಯ ಬಾಗಿಲು ಹಾಕಿಕೊಂಡು ಒಳಗಿದ್ದ. ರಾತ್ರಿ ಪೋಷಕರ ಮನೆಗೆ ಹೋಗಿ ಹುಡುಕುವ ರೀತಿಯಲ್ಲಿ ನಟಿಸಿದ್ದ. ಏ. 21ರಂದು ಬೆಳಿಗ್ಗೆ ಆತನೇ ಅಕ್ಕಪಕ್ಕದ ಮನೆಯವರ ಬಳಿ ಹೋಗಿ ಬಾಲಕಿ ಬಂದಿದ್ದಾಳೆಯೇ ಎಂದು ವಿಚಾರಿಸಿದ್ದ’.

‘ಪೋಷಕರು ದೂರು ಕೊಟ್ಟ ಬಳಿಕ ಆತ ಪರಾರಿಯಾಗಿದ್ದಾನೆ. ಸದ್ಯ ಆತ ಪತ್ನಿಯೊಂದಿಗೆ ಯಾದಗಿರಿಯ ಶಹಾಪುರದಲ್ಲಿರುವ ಮಾಹಿತಿ ಇದ್ದು, ಅಲ್ಲಿಯ ಪೊಲೀಸರಿಗೆ ವಿಷಯ ತಿಳಿಸಿದ್ದೇವೆ’ ಎಂದು ಅಧಿಕಾರಿ ವಿವರಿಸಿದರು.

ಮರಣೋತ್ತರ ಪರೀಕ್ಷೆ: ಕಿಮ್ಸ್‌ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ  ಸೋಮವಾರ ಮಧ್ಯಾಹ್ನ ನಡೆಯಿತು. ‘ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇದ್ದುದರಿಂದ ಅತ್ಯಾಚಾರ ಹಾಗೂ ಗಾಯದ ಗುರುತು ಪತ್ತೆ ಕಷ್ಟ. ಹೀಗಾಗಿ ಸಾವಿನ ಬಗ್ಗೆ ವೈದ್ಯರು ಸದ್ಯಕ್ಕೆ ಯಾವುದೇ ಅಭಿಪ್ರಾಯ ತಿಳಿಸಿಲ್ಲ. ದೇಹದ ಹಲವು ಭಾಗಗಳ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ’ ಎಂದು ಗಿರಿನಗರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.