ADVERTISEMENT

ಬಾಹುಬಲಿ–2 ಚಿತ್ರ ಪ್ರದರ್ಶನ: ಬೈಕ್‌ಗಳಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 20:05 IST
Last Updated 29 ಏಪ್ರಿಲ್ 2017, 20:05 IST

ಹೊಸಕೋಟೆ: ‘ಬಾಹುಬಲಿ–2’ ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಪಟ್ಟಣದ ಅಲಂಕಾರ್ ಚಿತ್ರಮಂದಿರದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಗೆ ಕಿಡಿಗೇಡಿ ಶನಿವಾರ ಬೆಂಕಿ ಹಚ್ಚಿದ್ದಾನೆ.

ಘಟನೆಯಲ್ಲಿ 3 ಸ್ಕೂಟರ್ ಮತ್ತು 5 ಬೈಕ್‌ಗಳು ಭಾಗಶಃ ಸುಟ್ಟುಹೋಗಿವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬೆಂಗಳೂರು ಪೂರ್ವ ತಾಲ್ಲೂಕು ವೀರೇನಹಳ್ಳಿಯ ಸಂತೋಷ್‌ ಕುಮಾರ್ (21) ಎಂಬಾತನನ್ನು ಬಂಧಿಸಿದ್ದಾರೆ.

‘ಅಲಂಕಾರ್ ಚಿತ್ರಮಂದಿರದಲ್ಲಿ ಬೆಳಿಗ್ಗೆ 10.30ಕ್ಕೆ ಬಾಹುಬಲಿ–2 ಚಿತ್ರದ ಪ್ರದರ್ಶನ ಆರಂಭವಾಗಿತ್ತು. ಅದೇ ವೇಳೆ ಚಿತ್ರಮಂದಿರಕ್ಕೆ ಬಂದಿದ್ದ ಸಂತೋಷ್‌, ಬೈಕ್‌ಗಳ ಮೇಲೆ  ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಅದನ್ನು ಗಮನಿಸಿದ ಚಿತ್ರಮಂದಿರದ ಸಿಬ್ಬಂದಿ, ಸ್ಥಳಕ್ಕೆ ಹೋಗಿ ಬೆಂಕಿ ನಂದಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಬೆಂಕಿ ಹಚ್ಚಿದ ಬಳಿಕ ಪರಾರಿಯಾಗುತ್ತಿದ್ದ ಆರೋಪಿಯನ್ನು ಚಿತ್ರಮಂದಿರದ ಸಿಬ್ಬಂದಿಯೇ ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ’ ಎಂದು ಹೇಳಿದರು.

‘ಕನ್ನಡ ಚಿತ್ರಗಳ ಬದಲು ಪರಭಾಷಾ ಚಿತ್ರಗಳ ಪ್ರದರ್ಶನಕ್ಕೆ ಚಿತ್ರಮಂದಿರದ ಮಾಲೀಕರು ಮುಂದಾಗಿದ್ದಾರೆ. ಇದನ್ನು ಖಂಡಿಸಿ ಕೃತ್ಯ ಎಸಗಿದ್ದೇನೆ’ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.