ಬೆಂಗಳೂರು: ವಿಧಾನಸಭಾ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಆಶಯದಿಂದ ನವೆಂಬರ್ 1ರಿಂದ ಬಿಜೆಪಿ ಆರಂಭಿಸಲಿರುವ ‘ನವ ಕರ್ನಾಟಕ ನಿರ್ಮಾಣ ಪರಿವರ್ತನಾ ರಥ ಯಾತ್ರೆ’ ಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ.
ರಥಯಾತ್ರೆ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವಂತೆ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಕೋರಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಲಿರುವ ರಥಯಾತ್ರೆ ಜಿಲ್ಲಾ ಕೇಂದ್ರ ತಲುಪಿದಾಗ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಅಪೇಕ್ಷೆ ಪಕ್ಷದ ನಾಯಕರದ್ದು. ಈ ಸಮಾವೇಶದಲ್ಲಿ ಪ್ರಧಾನಿ ಅಥವಾ ಅಧ್ಯಕ್ಷರು ಭಾಗವಹಿಸುವಂತೆ ವಿನಂತಿಸಲಾಗಿದೆ ಎಂದೂ ಮೂಲಗಳು ಹೇಳಿವೆ.
ಪಕ್ಷದ ಧ್ವಜ ಕಡ್ಡಾಯ: ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಲು ಎಲ್ಲ 56 ಸಾವಿರ ಮತಗಟ್ಟೆಗಳಲ್ಲಿ ಘಟಕ ಆರಂಭಿಸಲು ಬಿರುಸಿನ ಪ್ರಕ್ರಿಯೆ ಆರಂಭಗೊಂಡಿದೆ. ಮತಗಟ್ಟೆ ಹಂತದಲ್ಲಿ ಘಟಕ ರಚಿಸಲು ಹಾಗೂ ಅದರ ಚಟುವಟಿಕೆಯ ಕುರಿತು ವಿವರವಾದ ಟಿಪ್ಪಣಿಯನ್ನು ಎಲ್ಲ ಜಿಲ್ಲೆಗಳ ಅಧ್ಯಕ್ಷರಿಗೆ ರವಾನಿಸಲಾಗಿದೆ.
ಪ್ರತಿ ಮತಗಟ್ಟೆಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಸದಸ್ಯರನ್ನು ನೋಂದಣಿ ಮಾಡಿಕೊಳ್ಳಬೇಕು. ಘಟಕದ ಅಧ್ಯಕ್ಷರಾದವರು ಎಲ್ಲರನ್ನೂ ಸೇರಿಸಿ ಕಾರ್ಯ
ಕ್ರಮ ಹಮ್ಮಿಕೊಂಡು ತಮ್ಮ ಮನೆಯ ಮೇಲೆ ಪಕ್ಷದ ಬಾವುಟ ಹಾರಿಸಬೇಕು. ಚುನಾವಣೆಯ ಮುಗಿಯವವರೆಗೂ ಬಾವುಟ ಹಾರುತ್ತಿರಬೇಕು ಎಂದೂ ಸೂಚಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.