ADVERTISEMENT

ಬಿಡಿಎ: ಕೊಠಡಿಗೆ ಬೀಗ ಹಾಕಿ ಕೆಲಸ

​ಪ್ರಜಾವಾಣಿ ವಾರ್ತೆ
Published 27 ಜನವರಿ 2015, 20:14 IST
Last Updated 27 ಜನವರಿ 2015, 20:14 IST
ಬಿಡಿಎ ಸ್ಕ್ಯಾನಿಂಗ್‌ ಕೊಠಡಿಗೆ ಹೊರಗೆ ಬೀಗ ಹಾಕಿ ಒಳಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ದೃಶ್ಯ ಮಂಗಳವಾರ ಕಂಡು ಬಂತು
ಬಿಡಿಎ ಸ್ಕ್ಯಾನಿಂಗ್‌ ಕೊಠಡಿಗೆ ಹೊರಗೆ ಬೀಗ ಹಾಕಿ ಒಳಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ದೃಶ್ಯ ಮಂಗಳವಾರ ಕಂಡು ಬಂತು   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪ್ರಧಾನ ಕಚೇರಿ­ಯಲ್ಲಿ ಮಂಗಳವಾರ  ಸ್ಕ್ಯಾನಿಂಗ್‌ ಕೊಠಡಿಗೆ ಬೀಗ ಹಾಕಿಕೊಂಡು ಸಿಬ್ಬಂದಿ ಕಾರ್ಯನಿರ್ವಹಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಜೆಡಿಎಸ್‌ ಪಾಲಿಕೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಬೀಗ ತೆಗೆಯಲಾಯಿತು.

ಕೊಠಡಿಗೆ ಬೀಗ ಹಾಕಿ ಕಾರ್ಯನಿರ್ವಹಿಸುತ್ತಿದ್ದ ಸಂಗತಿ ತಿಳಿದ ಕೂಡಲೇ ಬಿಬಿಎಂಪಿ ಸದಸ್ಯರಾದ ಶ್ರೀನಿವಾಸ್, ಪ್ರಕಾಶ್, ಹನುಮಂತೇ­ಗೌಡ, ಗೋವಿಂದೇಗೌಡ ಕಚೇರಿಗೆ ಧಾವಿಸಿದರು. ‘ಬೀಗ ಹಾಕಿ ಕಾರ್ಯ­ನಿರ್ವಹಿಸುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು.

‘ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಕಾರ್ಯನಿರ್ವಹಿ­ಸಲಾಗುತ್ತಿದೆ’ ಎಂದು ಸಿಬ್ಬಂದಿ ಸಮ­ಜಾಯಿಷಿ ನೀಡಿದರು. ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಬೀಗ ತೆರೆಯಲಾಗಿದೆ.

‘ಪ್ರಾಧಿಕಾರದಲ್ಲಿ ನಿತ್ಯ ಹಗರಣಗಳು ನಡೆಯುತ್ತಿವೆ. ಅರ್ಕಾವತಿ ಡಿನೋಟಿ­ಫಿಕೇಶನ್‌ ಹಗರಣಕ್ಕೆ ಸಂಬಂಧಿಸಿದ ಕಡತಗಳು ಬಿಡಿಎನಲ್ಲಿ ಇವೆ. ನ್ಯಾಯಮೂರ್ತಿ ಕೆಂಪಣ್ಣ ಆಯೋಗಕ್ಕೆ ಕಡತಗಳನ್ನು ಇನ್ನೂ ನೀಡಿಲ್ಲ. ಕೊಠಡಿಗೆ ಬೀಗ ಹಾಕಿಕೊಂಡು ಪ್ರಮುಖ ಕಡತ­ಗಳನ್ನು ತಿದ್ದಿರುವ ಶಂಕೆ ಮೂಡಿದೆ’ ಎಂದು ಬಿಬಿಎಂಪಿ ಸದಸ್ಯ ಪ್ರಕಾಶ್ ಆರೋಪಿಸಿದರು.

‘ಕೊಠಡಿಯಲ್ಲಿ ಪ್ರಮುಖ ಕಡತ­ಗಳು ಇದ್ದ ಕಾರಣ ಸಿಸಿಟವಿ ಅಳವ­-ಡಿಸ­ಲಾಗಿದೆ ಜಾಗೂ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿ­ಸ­ಲಾಗಿದೆ. ಮಧ್ಯಾಹ್ನ ಒಂದು ಗಂಟೆ ವೇಳೆಗೆ ಊಟಕ್ಕೆ ಹೋಗುವಾಗ ಪೊಲೀಸ್‌ ಸಿಬ್ಬಂದಿ ಬೀಗ ಹಾಕಿ ಹೋಗಿದ್ದಾರೆ. ಅವರ ಬೇಜವಾಬ್ದಾರಿ­ತನದಿಂದ ಈ ಘಟನೆ ನಡೆದಿದೆ. ನನ್ನ ಗಮನಕ್ಕೆ ಬಂದ ಕೂಡಲೇ ಬೀಗ ತೆರೆಸಲಾಗಿದೆ’ ಎಂದು ಬಿಡಿಎ ಆಯುಕ್ತ ಶ್ಯಾಮ್‌ ಭಟ್ ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.