ADVERTISEMENT

ಮಕ್ಕಳು ಸೇರಿ 26 ಜೀತ ಕಾರ್ಮಿಕರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2015, 20:00 IST
Last Updated 3 ಮಾರ್ಚ್ 2015, 20:00 IST

ಬೆಂಗಳೂರು: ಬಾಗಲೂರಿನ ಇಟ್ಟಿಗೆ ಕಾರ್ಖಾನೆ­ಯೊಂದರ ಮೇಲೆ ಸೋಮವಾರ ದಾಳಿ ನಡೆಸಿದ ಸಿಐಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮಕ್ಕಳು ಸೇರಿದಂತೆ 26 ಜೀತದಾಳುಗಳನ್ನು ರಕ್ಷಿಸಿದ್ದಾರೆ. ‘ಇಟ್ಟಿಗೆ ಕಾರ್ಖಾನೆಯ ಮಾಲೀಕ ಹಲವು ವರ್ಷ­ಗಳಿಂದ ಒಡಿಶಾ ಮೂಲದ ಕಾರ್ಮಿಕರನ್ನು ಜೀತಕ್ಕೆ ಇಟ್ಟುಕೊಂಡಿರುವ ಬಗ್ಗೆ ಸ್ವಯಂ ಸೇವಾ ಸಂಸ್ಥೆ­ಯೊಂದು (ಎನ್‌ಜಿಒ) ಮಾಹಿತಿ ನೀಡಿತು.

ಆ ಮಾಹಿತಿ ಆಧರಿಸಿ ಸೋಮವಾರ ಬೆಳಿಗ್ಗೆ ಆರೋಗ್ಯ ಇಲಾಖೆ, ಸಿಐಡಿಯ ಮಾನವ ಸಾಗಣೆ ತಡೆ ಘಟಕ, ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರ ಜತೆ ಕಾರ್ಯಾಚರಣೆ ನಡೆಸಿ ಕಾರ್ಮಿಕರನ್ನು ರಕ್ಷಿಸಲಾಯಿತು’ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದರು.

‘ರಕ್ಷಿಸಲಾದ ಕಾರ್ಮಿಕರಲ್ಲಿ 12 ಪುರುಷರು, ಎಂಟು ಮಹಿಳೆಯರು ಹಾಗೂ ಆರು ಮಕ್ಕಳು ಇದ್ದಾರೆ. ಅವರನ್ನು ಇಂಟರ್‌­ನ್ಯಾಷನಲ್‌
ಜಸ್ಟಿಸ್‌ ಮಿಷನ್‌ (ಐಜೆಎಂ) ಎಂಬ ಸ್ವಯಂ ಸೇವಾ ಸಂಸ್ಥೆಯ ನೆರವಿನಿಂದ ಒಡಿಶಾಕ್ಕೆ ಕಳುಹಿಸಲಾ­ಗಿದೆ. ಕಾರ್ಖಾನೆ ಮಾಲೀಕ ಶ್ಯಾಮೇಗೌಡ ಅವರ ವಿರುದ್ಧ ಜೀತಕ್ಕಾಗಿ ವ್ಯಕ್ತಿಯನ್ನು ಖರೀದಿಸು­ವುದು (ಐಪಿಸಿ 370), ಕಾನೂನು ಬಾಹಿರ­ವಾಗಿ ದುಡಿಸಿ­ಕೊಳ್ಳುವುದು (ಐಪಿಸಿ 374) ಹಾಗೂ ಮಾನವ ಸಾಗಣೆ ಆರೋಪದಡಿ ಬಾಗಲೂರು ಠಾಣೆ­ಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಅವರನ್ನು ಬಂಧಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಐಜೆಎಂ ಸದಸ್ಯ ಜೋಸೆಫ್, ‘ದಲ್ಲಾಳಿಯ ಜತೆ ನಾಲ್ಕು ತಿಂಗಳ ಹಿಂದೆ ಒಡಿಶಾಗೆ ಹೋಗಿದ್ದ ಶ್ಯಾಮೇಗೌಡ, ವಾರಕ್ಕೆ ₹1,500 ಕೂಲಿ  ಕೊಡುವುದಾಗಿ ನಂಬಿಸಿ ಕಾರ್ಮಿಕರನ್ನು ನಗರಕ್ಕೆ ಕರೆದುಕೊಂಡು ಬಂದಿದ್ದರು.  ನಿತ್ಯ 15 ತಾಸು ದುಡಿಸಿಕೊಳ್ಳುತ್ತಿದ್ದ ಅವರು, ಮೂರು ಮಂದಿಯುಳ್ಳ ಕುಟುಂಬವೊಂದಕ್ಕೆ ಮಾಸಿಕ ₹ 300 ಮಾತ್ರ ನೀಡುತ್ತಿದ್ದರು.

ನಿಯಮದ ಪ್ರಕಾರ ದಿನಕ್ಕೆ ₹ 252 ಕನಿಷ್ಠ ಕೂಲಿ ಸಿಗಬೇಕು. ಆದರೆ, ಇವರಿಗೆ ದಿನಕ್ಕೆ ₹ 9 ರಿಂದ ₹ 15 ಮಾತ್ರ ನೀಡಲಾಗುತ್ತಿತ್ತು ಎಂಬುದು ಕಾರ್ಮಿಕರ ವಿಚಾರಣೆಯಿಂದ ಗೊತ್ತಾಗಿದೆ’ ಎಂದರು. ‘ರಕ್ಷಿಸಲಾದ ಜೀತದಾಳುಗಳಲ್ಲಿ 5 ರಿಂದ 10 ವರ್ಷದ ಆರು ಮಕ್ಕಳು ಇದ್ದಾರೆ. ಮಾಲೀಕರು,  ಆ ಮಕ್ಕಳನ್ನೂ ಸಹ ಕೆಲಸದಲ್ಲಿ ತೊಡಗಿಸುವಂತೆ ಪೋಷ­ಕ­­­ರಿಗೆ ಒತ್ತಾಯಿಸುತ್ತಿದ್ದರು. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಜತೆಗೆ ಶಾಲೆಗೆ ಹೋಗ­ಬೇಕಾದ ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟಿರುವುದು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ. ಹೀಗಾಗಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಇಟ್ಟಿಗೆ ಒಡೆದರೆ, ಪೈಪ್‌ನಿಂದ ಹೊಡೆತ’
‘ಒಡಿಶಾದಲ್ಲಿ ಸೈಕಲ್‌ ರಿಕ್ಷಾ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದೆ. ಪ್ರಯಾಣಿಕನ ಸೋಗಿನಲ್ಲಿ ಬಂದ ದಲ್ಲಾಳಿಯೊಬ್ಬ, ಹಣದ ಆಮಿಷ ತೋರಿಸಿ ಈ ಇಟ್ಟಿಗೆ ಕಾರ್ಖಾನೆಗೆ ಕರೆದುಕೊಂಡು ಬಂದ. ಬಳಿಕ ಇಡೀ ಕುಟುಂಬವನ್ನು ಅಕ್ರಮ ಬಂಧನದಲ್ಲಿಟ್ಟು ದುಡಿಸಿಕೊಳ್ಳಲು ಆರಂಭಿಸಿದರು. ಕಾರ್ಖಾನೆಯಲ್ಲಿ ವ್ಯವಸ್ಥಿತ ಶೌಚಾ­ಲಯ ಇರಲಿಲ್ಲ.

ಸಕಾಲಕ್ಕೆ ಕೂಲಿ ಸಹ ಕೊಡುತ್ತಿ­ರಲಿಲ್ಲ. ತರಕಾರಿ– ದಿನಸಿ ವಸ್ತುಗಳನ್ನು ತರಲು ಮಂಗಳವಾರ ಎರಡು ತಾಸು ಬಿಡುವು ಕೊಡುತ್ತಿದ್ದರು. ಮಕ್ಕಳಿಗೆ ಇಟ್ಟಿಗೆ ಜೋಡಿಸುವ ಕೆಲಸ ಕೊಟ್ಟಿದ್ದರು. ಇಟ್ಟಿಗೆ ಒಡೆದರೆ ಪೈಪ್‌ನಿಂದ ಮಕ್ಕಳಿಗೆ ಹೊಡೆಯುತ್ತಿದ್ದರು’ ಎಂದು ಕಾರ್ಮಿಕನೊಬ್ಬ ‘ಪ್ರಜಾವಾಣಿ’ಗೆ ವಿವರಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.