ADVERTISEMENT

ಮಗುವನ್ನು ಬಕೆಟ್‌ನಲ್ಲಿ ಮುಳುಗಿಸಿದ ದುಷ್ಕರ್ಮಿಗಳು

ತಾಯಿ–ಮಗಳ ಕೊಲೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:59 IST
Last Updated 26 ಮಾರ್ಚ್ 2015, 19:59 IST

ಬೆಂಗಳೂರು: ಸುಂಕದಕಟ್ಟೆ ಸಮೀಪದ ಹೊಯ್ಸಳನಗರದಲ್ಲಿ ಗುರುವಾರ ದುಷ್ಕರ್ಮಿಗಳು ಪಲ್ಲವಿಬಾಯಿ (28) ಹಾಗೂ ಅವರ ಹನ್ನೊಂದು ತಿಂಗಳ ಹೆಣ್ಣು ಮಗುವನ್ನು ಕೊಲೆ ಮಾಡಿದ್ದಾರೆ.

ಬೆಳಿಗ್ಗೆ 10.30ರ ಸುಮಾರಿಗೆ ಕೊಲೆಯಾಗಿರುವ ಸಾಧ್ಯತೆ ಇದೆ. ಪಲ್ಲವಿ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಮಗುವನ್ನು ನೀರಿನ ಬಕೆಟ್‌ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ದೊಡ್ಡಬಳ್ಳಾಪುರದವರಾದ ಪಲ್ಲವಿಬಾಯಿ ಅವರು ಎರಡು ವರ್ಷಗಳ ಹಿಂದ ಬಾಲಾಜಿ ಎಂಬುವರನ್ನು ಮದುವೆಯಾಗಿದ್ದರು. ಬಾಲಾಜಿ, ಜೀವನ್‌ಭಿಮಾನಗರದ ‘ಸಾಫ್ಟ್‌ಟೆಲ್‌’ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಘಟನೆ ವೇಳೆ ಬಾಲಾಜಿ ಮನೆಯಲ್ಲಿ  ಇರಲಿಲ್ಲ. ಸ್ಥಳೀಯರು ಅವರ ಮನೆ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.  ಪ್ರಕರಣ ಸಂಬಂಧ ಬಾಲಾಜಿ, ಹಾಗೂ ಸುತ್ತಮುತ್ತಲಿನ ಮನೆಯವರನ್ನು ವಿಚಾರಣೆ ನಡೆಸಲಾಗುತ್ತಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವರದಕ್ಷಿಣೆ ಹಣ ತರುವಂತೆ ಮಗಳಿಗೆ ಕಿರುಕುಳ ನೀಡುತ್ತಿದ್ದ. ಈ ಕಾರಣಕ್ಕೆ ಅವರ ನಡುವೆ ಜಗಳವಾಗುತ್ತಿತ್ತು. ಮಗಳ ಸಾವಿಗೆ ಅಳಿಯ ಬಾಲಾಜಿಯೇ ಕಾರಣ’ ಎಂದು ಪಲ್ಲವಿಬಾಯಿ ಅವರ ಪೋಷಕರು ದೂರಿದ್ದಾರೆ. ಘಟನೆಯ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಳೆ ನಾಮಕರಣವಿತ್ತು
ಶನಿವಾರ (ಮಾರ್ಚ್‌ 28) ಮೊಮ್ಮಗಳ ನಾಮಕರಣವಿತ್ತು. ನಾಮಕರಣಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಷ್ಟರಲ್ಲೇ ಅವಳ ಕೊಲೆಯಾಗಿದೆ ಎಂದು ಪಲ್ಲವಿ ಅವರ ಪೋಷಕರು ಕಣ್ಣೀರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.