ಬೆಂಗಳೂರು: ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಎಲ್ಲ ಸಂತ್ರಸ್ತ ಕುಟುಂಬಳಿಗೂ ಸರ್ಕಾರ ಪರಿಹಾರ ನೀಡಿಲ್ಲ ಎಂದು ವಿಧಾನಪರಿಷತ್ತಿನಲ್ಲಿ ಜೆಡಿಎಸ್ನ ರಮೇಶ್ ಬಾಬು ದೂರಿದರು.
ಬುಧವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 1450 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಪರಿಹಾರ ಸಿಕ್ಕಿರುವುದು 200 ರಿಂದ 300 ಕುಟುಂಬಗಳಿಗೆ ಮಾತ್ರ ಎಂದು ಹೇಳಿದರು.
‘ರಾಜ್ಯದ ಎಲ್ಲ ವರ್ಗಗಳಿಗೆ ಅನ್ವಯ ಆಗುವಂತಹ ಬಜೆಟ್ ನೀಡಬೇಕಿತ್ತು. ಆದರೆ, ಕೆಲ ಸಮುದಾಯಗಳಿಗೆ ಮಾತ್ರ ಒತ್ತು ನೀಡಿದ್ದೀರಿ’ ಎಂದರು.
ಬಿಜೆಪಿಯ ಭಾನುಪ್ರಕಾಶ್ ಮಾತನಾಡಿ, ಸರ್ಕಾರ ಮಾಡಿರುವ ಸಾಲದಿಂದಾಗಿ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ₹40 ಸಾವಿರ ಹೊರೆ ಬಿದ್ದಂತಾಗಿದೆ ಎಂದು ಹೇಳಿದರು.
‘ಮೌಲ್ವಿಗಳಿಗೆ ₹ 4000 ಕೊಟ್ಟಿದ್ದೀರಿ. ಆ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಅರ್ಚಕರಿಗೆ ಒಂದು ಪೈಸೆಯಾದರೂ ನೀಡಬೇಕಿತ್ತಲ್ಲ. ಈ ತಾರತಮ್ಯ ಏತಕ್ಕೆ ಎಂದು ಅವರು ಪ್ರಶ್ನಿಸಿದರು.