ಬೆಂಗಳೂರು: ‘ಶಾಲೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಕೂಡಲೇ ರೂ 1 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಶುಕ್ರವಾರ ದೇವರ ಜೀವನಹಳ್ಳಿ ಸಮೀಪದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಹಲ್ಲಿ ಬಿದ್ದಿದ್ದ ಆಹಾರ ಸೇವಿಸಿ 355 ಮಕ್ಕಳು ಅಸ್ವಸ್ಥಗೊಂಡಿದ್ದರು. ಹೀಗಾಗಿ, ಸಚಿವರು ಶನಿವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಶಾಲೆಯಲ್ಲಿ ಮೂಲಸೌಕರ್ಯಗಳಿಲ್ಲ, ಶುದ್ಧತೆಯಿಲ್ಲ, ಕಟ್ಟಡಗಳು ಸರಿಯಾಗಿಲ್ಲ. ಒಟ್ಟಾರೆಯಾಗಿ ಶಾಲೆಯು ಅವ್ಯವಸ್ಥೆಯಿಂದ ಕೂಡಿದೆ. ಶಾಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.
‘ಶುಕ್ರವಾರ ದಾಖಲಾಗಿದ್ದ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ. ಆದರೆ, ಪೋಷಕರ ಒತ್ತಾಯದ ಮೇರೆಗೆ 15 ರಿಂದ 20 ಮಕ್ಕಳನ್ನು ಶನಿವಾರ ಮತ್ತೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ’ ಎಂದು ಅಂಬೇಡ್ಕರ್ ಆಸ್ಪತ್ರೆಯ ವೈದ್ಯ ಪರಶುರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮಕ್ಕಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ. ಬಹುತೇಕ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ’ ಎಂದರು.
ಪ್ರಕರಣ ದಾಖಲು
‘ಶಾಲೆಯ ಅಡುಗೆ ಕೋಣೆಯ ಮೇಲ್ವಿಚಾರಕರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ’ ಎಂದು ಆರೋಪಿಸಿ ಜರೀನಾ ಎಂಬ ಪೋಷಕರು ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ಮೇಲ್ವಿಚಾರಕರ ವಿರುದ್ಧ ವಿಷಕಾರಿ ವಸ್ತುಗಳಿಗೆ ಸಂಬಂಧಪಟ್ಟಂತೆ ನಿರ್ಲಕ್ಷ್ಯ ತೋರಿದ (ಐಪಿಸಿ 284) ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ’
– ಸತೀಶ್ ಕುಮಾರ್,
ಪೂರ್ವ ವಿಭಾಗದ ಡಿಸಿಪಿ
ಇಸ್ಕಾನ್ ವಿವರಣೆ
ಅಕ್ಷಯ ಪಾತ್ರೆ ಯೋಜನೆ ಅಡಿತಯಾರಿಸುವ ಆಹಾರ ಗುಣಮಟ್ಟದಿಂದಲೇ ಇರುತ್ತದೆ. ಕಾಳಜಿ ವಹಿಸಿ ತಯಾರಿಸಲಾಗುತ್ತದೆ. ಶುಕ್ರವಾರ ಡಿ.ಜೆ.ಹಳ್ಳಿಯ ಉರ್ದು ಮಾದರಿ ಪ್ರಾಥಮಿಕ ಶಾಲೆಗೆ ನೀಡಿದ ಆಹಾರವನ್ನು ಬೇರೆ ಇತರೆ ಶಾಲೆಗಳಿಗೂ ನೀಡಲಾಗಿತ್ತು. ಆದರೆ, ಅಲ್ಲಿಂದ ಯಾವುದೇ ದೂರುಗಳು ದಾಖಲಾಗಿಲ್ಲ. ಆಹಾರದ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಕ್ಷಯ ಪಾತ್ರೆ ಫೌಂಡೇಶನ್ ವಿವರಣೆ ನೀಡಿದೆ.
355 ವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ: ಇಸ್ಕಾನ್ಗೆ ನೋಟಿಸ್
ಡಿ.ಜೆ.ಹಳ್ಳಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ಮಕ್ಕಳೆಲ್ಲರೂ ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಊಟವನ್ನು ಸರಬರಾಜು ಮಾಡಿದ ಇಸ್ಕಾನ್ ಸಂಸ್ಥೆಗೆ ಪ್ರಕರಣದ ಮಾಹಿತಿ ನೀಡುವಂತೆ ಶೋಕಾಸ್ ನೋಟಿಸ್ ನೀಡಲಾಗಿದೆ. ಜತೆಗೆ ಈ ಸಂಬಂಧ ವಿಚಾರಣಾ ವರದಿ ತಯಾರಿಸಲಾಗುತ್ತಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.
– ಮೊಹಮದ್ ಮೊಹಿಸಿನ್, ಆಯುಕ್ತ.
ಸಾರ್ವಜನಿಕ ಶಿಕ್ಷಣ ಇಲಾಖೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.