ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿಗದಿತ ಸಮಯಕ್ಕೆ ತಲುಪುವ ಉದ್ದೇಶದಿಂದ ಮೇ 28ರಂದು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ರಾಜಭವನ ಜಂಕ್ಷನ್ನಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ಸದ್ಯ ಬಸವೇಶ್ವರ ವೃತ್ತ, ಹೈಗ್ರೌಂಡ್ಸ್ ವೃತ್ತ ಮೂಲಕ ಸಂಚರಿಸುತ್ತಿವೆ.
ಆ ಮಾರ್ಗದ ವಾಹನಗಳು, ಎಲ್.ಆರ್.ಡಿ.ಇ. ಜಂಕ್ಷನ್, ಹೈಗ್ರೌಂಡ್ಸ್ ಜಂಕ್ಷನ್ ಮೂಲಕ ದ್ವಿಮುಖ ರಸ್ತೆಯಲ್ಲಿ ಸಂಚರಿಸಬಹುದು.
ಬಿ.ಎಚ್.ಇ.ಎಲ್. ವೃತ್ತದಿಂದ ಮೇಖ್ರಿ ವೃತ್ತಕ್ಕೆ ಹೋಗುವ ವಾಹನಗಳು ಕಾವೇರಿ ಎಲಿಮೆಂಟ್ಸ್, ಅಲ್ಲಿಂದ ಎಡ ತಿರುವು ಪಡೆದು ರಮಣಮಹರ್ಷಿ ರಸ್ತೆ ಮೂಲಕ ಮೇಖ್ರಿ ವೃತ್ತ, ಕಾವೇರಿ ವೃತ್ತದ ಕಡೆಗೆ ಅಥವಾ ಬಲ ತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ಹೋಗಬಹುದು.
ಸಂಜೆ ವೇಳೆ ಮೇಖ್ರಿ ವೃತ್ತ– ಕೆ.ಕೆ. ರಸ್ತೆ ಮೂಲಕ ಮೆಜೆಸ್ಟಿಕ್ ಕಡೆ ಹೋಗುತ್ತಿದ್ದ ವಾಹನಗಳು ಟಿ. ಚೌಡಯ್ಯ ರಸ್ತೆ, ಹೈಗ್ರೌಂಡ್ಸ್ ಜಂಕ್ಷನ್, ಎಲ್.ಆರ್.ಡಿ.ಇ ಜಂಕ್ಷನ್, ಬಸವೇಶ್ವರ ಜಂಕ್ಷನ್ ಮೂಲಕ ಅಥವಾ ಲೀ ಮೆರಿಡಿಯನ್ ಹೋಟೆಲ್ ಬಳಿ ಎಡ ತಿರುವು ಪಡೆದು ಕನ್ನಿಂಗ್ಹ್ಯಾಂ ರಸ್ತೆ, ಅವಿನಾಶ್ ಪೆಟ್ರೋಲ್ ಬಂಕ್, ಚಂದ್ರಿಕಾ ಜಂಕ್ಷನ್, ಮಿಲ್ಲರ್ ರಸ್ತೆ ಮೂಲಕ ಸಂಚರಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದು ಪ್ರಾಯೋಗಿಕವಾಗಿದ್ದು, ಯಶಸ್ವಿಯಾದರೆ ಮುಂದುವರಿಸಲು ಚಿಂತನೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.