ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಜಗಳವಾಗಿ ಮನೋಜ್ (28) ಎಂಬಾತ, ಸುತ್ತಿಗೆಯಿಂದ ತಲೆಗೆ ಹೊಡೆದು ತನ್ನ ತಂದೆ ನಾರಾಯಣಸ್ವಾಮಿ (65) ಅವರನ್ನು ಕೊಲೆಗೈದಿದ್ದಾನೆ.
ರಾಮಮೂರ್ತಿನಗರದ ಕೌದೇನಹಳ್ಳಿಯಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಭಾನುವಾರ ಮಧ್ಯಾಹ್ನ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಆಸ್ತಿ ಹಂಚಿಕೆ ವಿಚಾರವಾಗಿ ಕುಟುಂಬ ಸದಸ್ಯರ ನಡುವೆ ಹಲವು ವರ್ಷಗಳಿಂದ ಮನಸ್ತಾಪವಿತ್ತು. ಇದೇ ಕಾರಣದಿಂದ ಪತ್ನಿ–ಮಕ್ಕಳು ನಾರಾಯಣಸ್ವಾಮಿ ಅವರಿಂದ ಪ್ರತ್ಯೇಕವಾಗಿದ್ದರು. ಮನೋಜ್ ಅವರು ತಾಯಿ ಹಾಗೂ ಅಕ್ಕನ ಜತೆ ವೈಟ್ಫೀಲ್ಡ್ ಸಮೀಪದ ಸೀಗೆಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದ.
ಕೌದೇನಹಳ್ಳಿಯಲ್ಲಿ ನಾರಾಯಣಸ್ವಾಮಿ ಅವರಿಗೆ ಸೇರಿದ ಏಳು ಮನೆಗಳಿದ್ದು, ತಿಂಗಳಿಗೆ ₹ 40 ಸಾವಿರ ಬಾಡಿಗೆ ಬರುತ್ತಿತ್ತು. ಮದುವೆಯಾಗಲು ಇತ್ತೀಚೆಗೆ ನಿರ್ಧರಿಸಿದ್ದ ಮನೋಜ್, ತನ್ನ ಜೀವನ ರೂಪಿಸಿಕೊಳ್ಳಲು ತಂದೆ ಬಳಿ ಹಣಕಾಸಿನ ನೆರವು ಕೋರಿದ್ದ. ಅಲ್ಲದೆ, ಮುಂದಿನ ದಿನಗಳಲ್ಲಿ ಮನೆ ಬಾಡಿಗೆ ಹಣದಲ್ಲಿ ತನಗೂ ಪಾಲು ನೀಡುವಂತೆ ಕೇಳಿದ್ದ. ಅದಕ್ಕೆ ನಾರಾಯಣಸ್ವಾಮಿ ಒಪ್ಪಿರಲಿಲ್ಲ.
ಶನಿವಾರ ಸಂಜೆ ಮನೋಜ್ ತಂದೆಯ ಮನೆಗೆ ಹೋದಾಗ ಇದೇ ವಿಚಾರವಾಗಿ ಗಲಾಟೆಯಾಗಿತ್ತು. ಈ ಹಂತದಲ್ಲಿ ಆರೋಪಿ ಸುತ್ತಿಗೆಯಿಂದ ನಾಲ್ಕು ಬಾರಿ ತಲೆಗೆ ಹೊಡೆದಿದ್ದ. ತಂದೆ ರಕ್ತದ ಮಡುವಿನಲ್ಲಿ ಕುಸಿದು ಬೀಳುತ್ತಿದ್ದಂತೆಯೇ ಹೊರಗಿನಿಂದ ಚಿಲಕ ಹಾಕಿಕೊಂಡು ತನ್ನ ಮನೆಗೆ ಮರಳಿದ್ದ ಎಂದು ಪೊಲೀಸರು ಹೇಳಿದ್ದಾರೆ.
ತಂದೆ ಮೇಲೆ ಹಲ್ಲೆ ನಡೆಸಿ ಬಂದಿರುವ ವಿಚಾರವನ್ನು ಆತ ಭಾನುವಾರ ಮಧ್ಯಾಹ್ನ ಸಂಬಂಧಿಯೊಬ್ಬರ ಬಳಿ ಹೇಳಿದ್ದ. ಕೂಡಲೇ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಮನೆಗೆ ಹೋಗಿ ನೋಡಿದಾಗ ನಾರಾಯಣಸ್ವಾಮಿ ಅವರು ಮೃತಪಟ್ಟಿದ್ದರು ಎಂದು ರಾಮಮೂರ್ತಿನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.