ADVERTISEMENT

ಹಣಕ್ಕೆ ಬೆದರಿಕೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2016, 19:43 IST
Last Updated 19 ಅಕ್ಟೋಬರ್ 2016, 19:43 IST

ಬೆಂಗಳೂರು: ಹಣಕ್ಕಾಗಿ ಉದ್ಯಮಿ ಅನಿಲ್‌ ಗೋಯಲ್‌ ಎಂಬುವರಿಗೆ ಬೆದರಿಕೆ ಕರೆ ಮಾಡಿದ್ದ ಇಟ್ಟಮಡುವಿನ ನಿವಾಸಿ ಕೆಂಪೇಗೌಡ (27) ಎಂಬುವರನ್ನು ಸುಬ್ರಮಣ್ಯಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

‘ಉತ್ತರಹಳ್ಳಿ ಮುಖ್ಯರಸ್ತೆಯ ಬೃಂದಾವನ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಅನಿಲ್‌ ಗೋಯಲ್‌, ಕೆಂಗೇರಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಳಿ ಗ್ರಾನೈಟ್‌ ವ್ಯಾಪಾರ ಮಾಡುತ್ತಿದ್ದಾರೆ. ಆರೋಪಿ ಕೆಂಪೇಗೌಡ ಅದೇ ಅಪಾರ್ಟ್‌ಮೆಂಟ್‌ನಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಅನಿಲ್‌ ಅವರ ಚಲನವಲನ ಹಾಗೂ ಹಣ ಸಾಗಾಟವನ್ನು ಗಮನಿಸಿದ್ದ ಕೆಂಪೇಗೌಡ, ಹಣ ನೀಡುವಂತೆ ಬೆದರಿಕೆ ಕರೆ ಮಾಡಿದ್ದರು. ಅಲ್ಲದೆ, ಮೆಸೇಜ್‌ ಮಾಡಿ ಬೆದರಿಕೆ ಹಾಕಿದ್ದರು. ಹೀಗಾಗಿ ಅನಿಲ್‌ ಅವರು ಅಕ್ಟೋಬರ್‌ 7ರಂದು ದೂರು ನೀಡಿದ್ದರು.’

ADVERTISEMENT

‘ಆರೋಪಿಯ ಮೊಬೈಲ್‌ ಕರೆಗಳು ಹಾಗೂ ಮೆಸೇಜ್‌ಗಳ ಮಾಹಿತಿ ಕಲೆ ಹಾಕಿದೆವು. ಹಣ ಕೊಡುವುದಾಗಿ ಉದ್ಯಮಿಯಿಂದ ಹೇಳಿಸಿ ನಿರ್ದಿಷ್ಟ ಸ್ಥಳಕ್ಕೆ ಆರೋಪಿಯನ್ನು ಕರೆಸಿಕೊಳ್ಳುವ ಪ್ರಯತ್ನ ಮಾಡಿದೆವು. ಆದರೆ, ಅಲ್ಲಿ ಬನ್ನಿ, ಇಲ್ಲಿ ಬನ್ನಿ ಎಂದು ಆರೋಪಿ ಸಾಕಷ್ಟು ಬಾರಿ ಸತಾಯಿಸಿದ್ದರು.  ಕೊನೆಗೂ ಆರೋಪಿಯನ್ನು ಬಂಧಿಸಿದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.