ADVERTISEMENT

ಹುತಾತ್ಮ ಯೋಧರ ಕುಟುಂಬಕ್ಕೆ ನೆರವು

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಬೆಂಗಳೂರು:  ‘ಎಲ್ಲ ತಾಯಂದಿರು ಮಕ್ಕಳಿಗೆ ಪ್ರೀತಿ ತುಂಬುವುದರ ಜೊತೆಗೆ  ದೇಶಪ್ರೇಮವನ್ನು ಬೆಳೆಸಬೇಕು’ ಎಂದು ಸಿಯಾಚಿನ್‌ ನಿರ್ಗಲ್ಲಿನಲ್ಲಿ ಹುತಾತ್ಮರಾದ ಯೋಧ ಮಹೇಶ್‌ ಅವರ ತಾಯಿ ಸರ್ವಮಂಗಳ ತಿಳಿಸಿದರು.

ನಗರದಲ್ಲಿ ಗುರುವಾರ  ಅಮೆರಿಕದ ಸಂಗಮ ಸೇಂಟ್ ಲೂಯಿಸ್ ಕನ್ನಡ ಸಂಘ ಗೆಳೆಯರ ಬಳಗ ಮತ್ತು ಬೆಂಗಳೂರು ಪ್ರೆಸ್‌ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ಹುತಾತ್ಮ ಯೋಧರ ಕುಟುಂಬಕ್ಕೆ ಸಹಾಯಾರ್ಥ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನ್ನ ಮಗ ದೇಶಕ್ಕಾಗಿ ವೀರ ಮರಣ ಹೊಂದಿದ್ದಾನೆ. ಪ್ರತಿ ಮನೆಯಲ್ಲೂ ಒಬ್ಬರನ್ನು ಸೈನಿಕರನ್ನಾಗಿ ಬೆಳೆಸಬೇಕು. ಅವನಿಗೆ ಮಕ್ಕಳಿದ್ದಿದ್ದರೆ ಅವರನ್ನು ಸೈನಿಕನನ್ನಾಗಿ ಮಾಡುತ್ತಿದ್ದೆ’ ಎಂದು ಹೇಳಿದರು.

ಅಮೆರಿಕಾದ ಸೇಂಟ್ ಲೂಯಿಸ್ ಕನ್ನಡ ಸಂಘ ಗೆಳೆಯರ ಬಳಗದ ಕಾರ್ಯದರ್ಶಿ ಸತೀಶ ನಂಜಪ್ಪ ಮಾತನಾಡಿ, ‘ಕಣ್ಣು ಅರಿಯದೇ ಇರುವುದನ್ನು ಕರುಳ ಬಳ್ಳಿ ಅರಿಯುತ್ತದೆ. ನಾವು ಅಮೆರಿಕದಲ್ಲಿದ್ದರೂ ನಮ್ಮ ಮನಸ್ಸು ದೇಶಕ್ಕಾಗಿ ಮಿಡಿಯುತ್ತದೆ. ಹುತಾತ್ಮ ಯೋಧರ ಕುಟುಂಬಕ್ಕೆ ಒಂದು ಸಣ್ಣ ಅಳಿಲು ಸೇವೆ ಮಾಡಲಾಗುತ್ತಿದೆ’ ಎಂದರು.

ಹುತಾತ್ಮರಾದ ಯೋಧರ ಮೂರು ಕುಟುಂಬದವರಿಗೆ ಅಮೆರಿಕ ಸೈಂಟ್ ಲೂಯಿಸ್ ಕನ್ನಡ ಸಂಘ ಗೆಳೆಯರ ಬಳಗದ ವತಿಯಿಂದ ತಲಾ ₹60 ಸಾವಿರ, ಬೆಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ತಲಾ ₹10 ಸಾವಿರ, ಛಾಯಾಗ್ರಾಹಕ ಮುನಿಕೃಷ್ಣಪ್ಪ ಅವರು ತಲಾ ₹5 ಸಾವಿರ ಚೆಕ್ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.