ಬೆಂಗಳೂರು: ‘ಜನರು ಆರ್ಥಿಕವಾಗಿ ಸಬಲರಾಗಲು ಹಾಗೂ ಜೀವನೋಪಾಯಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಹೈನೋದ್ಯಮವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು’ ಎಂದು ಸರ್ಜಾಪುರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಸ್.ಕೆ.ನಾರಾಯಣಸ್ವಾಮಿ ಸಲಹೆ ನೀಡಿದರು.
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತವು ಆಯೋಜಿಸಿದ್ದ ‘2015-16 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ’ ಯಲ್ಲಿ ಮಾತನಾಡಿದರು.
‘ರೈತರು ಗುಣಮಟ್ಟದ ಹಾಲನ್ನು ಡೇರಿಗೆ ಪೂರೈಕೆ ಮಾಡುತ್ತಿದ್ದು, ಇದರಿಂದ ಡೇರಿಯು ಅಭಿವೃದ್ಧಿಯಲ್ಲಿ ಸಾಗುತ್ತಿದೆ’ ಎಂದರು.
ಸಂಘದ ಅಧ್ಯಕ್ಷ ಮುನಿರಾಜು ಮಾತನಾಡಿ,‘ಸಂಘವು 1968ರಿಂದ ಉತ್ತಮ ಸೇವೆಯನ್ನು ಸದಸ್ಯರಿಗೆ ನೀಡುತ್ತ ಸ್ವಂತ ಕಟ್ಟಡ, ಗಣಕೀಕೃತ ಹಾಲು ಶೇಖರಣ ಕೇಂದ್ರ, ಕೃತಕ ಗರ್ಭಧಾರಣಾ ಘಟಕವನ್ನು ಹೊಂದಿದೆ. 2014–15ನೇ ಸಾಲಿನ ಬೆಂಗಳೂರು ಹಾಲು ಒಕ್ಕೂಟದ ಅತ್ಯುತ್ತಮ ಸಂಘ ಪ್ರಶಸ್ತಿಯನ್ನು ಪಡೆದುಕೊಂಡಿದೆ’ ಎಂದರು.
‘ಸಂಘವು ಪ್ರಸಕ್ತ ಸಾಲಿನಲ್ಲಿ ಸುಮಾರು ₹8.21 ಲಕ್ಷ ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಯಶ್ವಸಿನಿ ಆರೋಗ್ಯ ವಿಮೆಗೆ ಧನ ಸಹಾಯ, ಉಚಿತ ಕಾಲುಬಾಯಿ ಜ್ವರದ ಲಸಿಕೆ, ಉನ್ನತ ವ್ಯಾಸಂಗಕ್ಕೆ ಧನ ಸಹಾಯ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಾದ ಸಂಧ್ಯಾ ಆರ್.ರೆಡ್ಡಿ, ಚೋಕಿಲಚಲನ, ಶರಣ್ಕುಮಾರ್, ಸಂಧ್ಯಾ, ಜೀವಿತ, ಭವ್ಯಾ, ಪವನ್, ತೇಜಸ್, ಯುಕ್ತಿ, ಗೀತಾ, ದೀಕ್ಷಾ, ಸಿದ್ದೇಶ್, ಮಂಜುಶ್ರೀ ಹಾಗೂ ವರುಣ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.