ಬೆಂಗಳೂರು: ‘ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಹಲವು ಅಧಿಕಾರಿಗಳು ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗವನ್ನು(ರಾ) ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ‘ರಾ’ದ ನಿವೃತ್ತ ಅಧಿಕಾರಿ ಆರ್.ಕೆ.ಯಾದವ್ ಆರೋಪಿಸಿದರು.
ಮಾನಸ್ ಪಬ್ಲಿಕೇಷನ್ಸ್ ವತಿಯಿಂದ ನಗರದ ಪ್ರೆಸ್ಕ್ಲಬ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಆರ್.ಕೆ.ಯಾದವ್ ಅವರ ‘ಮಿಷನ್ ಆರ್ ಅಂಡ್ ಎ.ಡಬ್ಲ್ಯೂ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜೀವ್ಗಾಂಧಿ ಅವರ ಹತ್ಯೆಯಾದ ಸಂದರ್ಭದಲ್ಲಿ ಎಂ.ಕೆ.ನಾರಾಯಣನ್ ಅವರು ಇಂಟೆಲಿಜೆನ್ಸ್ ಬ್ಯೂರೊ (ಐಬಿ) ನಿರ್ದೇಶಕರಾಗಿದ್ದರು. ಅಧಿಕಾರ ದುರ್ಬಳಕೆ ಸೇರಿದಂತೆ ಹಲವು ಆರೋಪಗಳಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ ಅವರನ್ನು 2004ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಕ ಮಾಡಲಾಯಿತು’ ಎಂದು ಹೇಳಿದರು.
‘1970ಕ್ಕೂ ಹಿಂದೆ ‘ರಾ’ ಅತ್ಯಂತ ಶಕ್ತಿಯುತವಾದ ಸಂಸ್ಥೆಯಾಗಿತ್ತು. ನಂತರದ ದಶಕಗಳಲ್ಲಿ ‘ರಾ’ ದುರ್ಬಲವಾಗುತ್ತಾ ಸಾಗಿತು. ‘ರಾ’ ಕಾರ್ಯಾಚರಣೆಗೆ ಸರ್ಕಾರ ನೀಡಿದ್ದ ಅನುದಾನವನ್ನು ಸಹ ಹಲವು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂತಹ ಹಲವು ವಿಷಯಗಳನ್ನು ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ’ ಎಂದರು.
ನಿವೃತ್ತ ಲೋಕಾಯುಕ್ತ ನ್ಯಾ. ಎನ್.ಸಂತೋಷ್ ಹೆಗ್ಡೆ ಮಾತನಾಡಿ, ‘ದೇಶದ ಭದ್ರತಾ ವ್ಯವಸ್ಥೆ ಅಧಿಕಾರಿಗಳಿಂದ ಹೇಗೆ ದುರ್ಬಳಕೆ ಆಗುತ್ತಿದೆ ಎಂಬುದು ಕೃತಿಯಿಂದ ತಿಳಿಯುತ್ತದೆ. ಇದೊಂದು ಉತ್ತಮ ಕೃತಿ’ ಎಂದರು.
ರಾಜಕೀಯ ಹಸ್ತಕ್ಷೇಪ ಬೇಡ: ನ್ಯಾ.ಹೆಗ್ಡೆ
‘ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರ ಆರೋಪದಿಂದಾಗಿ ಮದ್ರಾಸ್ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಗಳ ಸೇವಾ ಅವಧಿ ವಿಸ್ತರಣೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಗೊತ್ತಾಗಿದೆ.
ನ್ಯಾಯಮೂರ್ತಿಗಳ ನೇಮಕ ವಿಷಯ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು’ ಎಂದು ಕಾರ್ಯಕ್ರಮದ ನಂತರ ಸಂತೋಷ್ ಹೆಗ್ಡೆ ಸುದ್ದಿಗಾರರಿಗೆ ತಿಳಿಸಿದರು.‘ನಗರದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರ ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.