ಬೆಂಗಳೂರು: ‘ಎಲ್ಲಾ ಧರ್ಮ ಗ್ರಂಥಗಳ ಸಾರವೂ ಒಂದೆ. ಕುರಾನ್ ಹಾಗೂ ಸಂಸ್ಕೃತ ಶ್ಲೋಕ ಪಠಣದ ಧ್ವನಿಗೆ ಸಾಮ್ಯತೆಯಿದೆ. ಇಡೀ ವಿಶ್ವದ ಸೃಷ್ಟಿಕರ್ತ ಒಬ್ಬನೆ. ಆದರೆ, ಹಲವು ಧರ್ಮಗಳ ಮೂಲಕ ಅವನನ್ನು ಆರಾಧಿಸುತ್ತಿದ್ದೇವೆ’ ಎಂದು ಸಾಹಿತಿ ಡಾ. ಏಜಾಸುದ್ದೀನ್ ತಿಳಿಸಿದರು.
ಧರ್ಮ ಜಾಗೃತಿ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಆರ್ಷಧಾರಾ’ ಅಂತರರಾಷ್ಟ್ರೀಯ ವೇದ ವಿಜ್ಞಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಋಗ್ವೇದದಲ್ಲಿ ಪ್ರಕೃತಿಯ ವರ್ಣನೆ ಬರುತ್ತದೆ. ಅದು ದೇವರು ಒಬ್ಬನೆ ಎಂಬುದನ್ನು ಸಾರುತ್ತದೆ. ಹೀಗಾಗಿ ಎಲ್ಲರೂ ಒಂದೆ ಎಂಬ ಭಾವನೆಯಿಂದ ಬೆರೆತು ಬಾಳಬೇಕು’ ಎಂದು ಸಲಹೆ ನೀಡಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಮಾತನಾಡಿ, ‘ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಂಸ್ಕೃತ ಹಾಗೂ ವೇದಗಳ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಂಸ್ಕೃತ ಭಾಷೆ ಹಾಗೂ ವೇದಗಳ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.