ADVERTISEMENT

‘ರೈತರ ಆತ್ಮಹತ್ಯೆ: ಸಿಬಿಐಗೆ ವಹಿಸಲು ಒತ್ತಾಯಿಸಿ’

ವಿರೋಧ ಪಕ್ಷಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 20:51 IST
Last Updated 1 ಏಪ್ರಿಲ್ 2015, 20:51 IST

ಬೆಂಗಳೂರು: ‘ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಹಿಂದಿರುವ ಸತ್ಯಾಸತ್ಯತೆಯನ್ನು ಹೊರ ಹಾಕಲು ಸಿಬಿಐ ತನಿಖೆಗೆ ವಿರೋಧಪಕ್ಷಗಳು ಒತ್ತಾಯಿಸಿದ್ದು ಶ್ಲಾಘನೀಯ. ಆದೇ ರೀತಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಪ್ರಕರಣಗಳನ್ನು ಸಿಬಿಐ ಅಥವಾ ಸಿಐಡಿಗೆ ವಹಿಸುವಂತೆ ಒತ್ತಾಯ ಮಾಡಲಿ’ ಎಂದು ಕೆಪಿಸಿಸಿ ಕಿಸಾನ್‌ ಖೇತ್‌ ಮಜ್ದೂರ್‌ ಕಾಂಗ್ರೆಸ್‌ನ ಉಪಾಧ್ಯಕ್ಷ ಸಚಿನ್‌ ಮೀಗಾ ಹೇಳಿದ್ದಾರೆ.

‘ಸದನದಲ್ಲಿ ವಿರೋಧ ಪಕ್ಷದ ನಾಯಕರು ರವಿ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ  ಪಟ್ಟು ಹಿಡಿದಿದ್ದರು. ಆದರೆ, ರವಿ ಅವರ ಸಾವಿನ ದಿನವೇ ಚಿಕ್ಕಮಗಳೂರಿನ ಬೊಮ್ಮಳಾಪುರದಲ್ಲಿ ಅಡಿಕೆ ಬೆಳೆಗಾರ ಚಿನ್ನಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಪ್ರಕರಣವನ್ನು ಸಿಬಿಐಗೆ ವಹಿಸಲು ಏಕೆ ಒತ್ತಾಯಿಸಲಿಲ್ಲ’ ಎಂದು ಅವರು  ಪತ್ರಿಕಾ ಹೇಳಿಕೆಯಲ್ಲಿ  ಪ್ರಶ್ನಿಸಿದ್ದಾರೆ.

‘ರವಿ ಅವರ ಪ್ರಕರಣವನ್ನು ವಿರೋಧ ಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿವೆ. ರಾಜ್ಯದಲ್ಲಿ ಬ್ಯಾಂಕುಗಳ ಕಿರುಕುಳದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಆ ವಿಷಯವನ್ನು ಈವರೆಗೆ ಒಮ್ಮೆಯೂ ಸದನದಲ್ಲಿ ವಿರೋಧ ಪಕ್ಷಗಳು ಪ್ರಸ್ತಾಪಿಸಿಲ್ಲ’ ಎಂದು ದೂರಿದ್ದಾರೆ.

‘ರಾಜ್ಯದಲ್ಲಿ 2003 ರಿಂದ 2014ರ ನಡುವೆ ಸುಮಾರು 3180 ರೈತರು ಸಾಲದ ಹೊರೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತಕಾರಿ ಅಂಶವಾಗಿದೆ’ ಎಂದು ಅವರು ವಿಷಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.