ಯಲಹಂಕ: ‘ವಿದ್ಯಾರ್ಥಿಗಳು ಸಂಶೋಧನೆಯ ಮನೋಭಾವವನ್ನು ಮೈಗೂಡಿಸಿಕೊಂಡು ಹೊಸ ಹೊಸ ಆವಿಷ್ಕಾರಗಳನ್ನು ಮಾಡಲು ಮುಂದಾಗಬೇಕು’ ಎಂದು ಕಾನ್ಪುರದ ಐಐಟಿಯ ಪ್ರಾಧ್ಯಾಪಕ ಪ್ರೊ. ಎಂ.ಆನಂದಕೃಷ್ಣನ್ ಸಲಹೆ ನೀಡಿದರು.
ಇಲ್ಲಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿ ರುವ ‘ಕಂಪ್ಯೂಟಿಂಗ್, ಮಾಹಿತಿ, ಸಂವಹನ ಮತ್ತು ಅನ್ವಯಿಕೆ’ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಕೊಠಡಿಗಳಲ್ಲಿ ಪಾಠ ಪ್ರವಚನ ಮಾಡುವುದಕ್ಕಷ್ಟೇ ಸೀಮಿತವಾಗಿತ್ತು. ಆದರೆ ಇಂದು ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಪಾಠ–ಪ್ರವಚನದ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಿಗೆ ಅನುಕೂಲವಾಗುವಂತೆ ಸಂಶೋಧನಾ ಕಾರ್ಯಕ್ರಮ ಗಳು ಒಂದು ಮುಖ್ಯ ಭಾಗವಾಗಿವೆ ಎಂದು ತಿಳಿಸಿದರು.
ಬೆಂಗಳೂರು ಐಐಎಸ್ಸಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರಾದ್ಯಾಪಕ ಪ್ರೊ.ಎನ್.ಬಾಲಕೃಷ್ಣನ್ ಮಾತನಾಡಿ, ಇಂದಿನ ಆಧುನಿಕ ಶಿಕ್ಷಣ ಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂವಹನ, ನ್ಯಾನೋ ಮತ್ತು ಜೈವಿಕ ತಾಂತ್ರಿಕತೆಗಳನ್ನು ಒಗ್ಗೂಡಿಸಿ, ರಾಷ್ಟ್ರದ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸುಭದ್ರತೆಯನ್ನು ಕಾಪಾಡಿಕೊಳ್ಳಲು ಆಧುನಿಕ ವಿಜ್ಞಾನಗಳ ಒಗ್ಗೂಡುವಿಕೆ ಮತ್ತು ಬಳಕೆ ಅತ್ಯವಶ್ಯಕ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ಎಚ್.ಸಿ. ನಾಗರಾಜ್, ಎಂಸಿಎ ವಿಭಾಗದ ಮುಖ್ಯಸ್ಥ ಡಾ.ಪ್ರಸಾದ್ ನಾಯಕ್ ಹಂಸಾವತ್, ಪ್ರಾಧ್ಯಾಪಕಿ ಡಾ.ಎನ್.ನಳಿನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.