ADVERTISEMENT

15 ಸಾವಿರಕ್ಕೂ ಹೆಚ್ಚು ಮತದಾರರ ಅರ್ಜಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:40 IST
Last Updated 19 ನವೆಂಬರ್ 2017, 19:40 IST

ಬೆಂಗಳೂರು: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಆನ್‌ಲೈನ್‌ ಮೂಲಕ ಮಹದೇವಪುರ ವಿಧಾನಸಭಾ ಕ್ಷೇತ್ರದ 15 ಸಾವಿರಕ್ಕೂ ಹೆಚ್ಚುಮಂದಿ ಸಲ್ಲಿಸಿದ್ದ ಅರ್ಜಿಗಳು ತಿರಸ್ಕೃತಗೊಂಡಿವೆ.

‘ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸಾವಿರಾರು ಜನರು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ (ಎನ್‌ವಿಎಸ್‌ಪಿ) ಮೂಲಕ ಅರ್ಜಿ ಸಲ್ಲಿಸಿದ್ದರು.

ಆದರೆ, ಈ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಪಾಲಿಕೆಯ ಕಂದಾಯ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆಯ ಪದಾಧಿಕಾರಿಗಳು ದೂರಿದರು.

ADVERTISEMENT

ಈ ಸಂಬಂಧ ಪ್ರತಿಕ್ರಿಯಿಸಿದಮಹದೇವಪುರ ವಲಯದ ಕಂದಾಯ ಅಧಿಕಾರಿ ಕೆಂಪರಂಗಯ್ಯ, ‘ಕೇಂದ್ರ ಚುನಾವಣಾ ಆಯೋಗದ ನಿರ್ದೇಶ
ನದಂತೆ ಅಕ್ಟೋಬರ್‌ 30ರಂದು ಪರಿಷ್ಕೃತ ಅಂತಿಮ ಮತದಾರರಪಟ್ಟಿ ಪ್ರಕಟಿಸಿದ್ದೇವೆ. ಆ ದಿನದವರೆಗೂ ಎನ್‌ವಿಎಸ್‌ಪಿ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈಗ ಆ ಪೋರ್ಟಲ್‌ ಬಂದ್‌ ಮಾಡಲಾಗಿದೆ’ ಎಂದು ತಿಳಿಸಿದರು.

‘ಆಕ್ಷೇಪಣೆಗೆ ಇದೇ 30ರವರೆಗೆ ಅವಕಾಶವಿದೆ. ಜನವರಿ 12ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸುತ್ತೇವೆ. ಆ ಬಳಿಕ ಎನ್‌ವಿಎಸ್‌ಪಿ ಮೂಲಕ ಮತ್ತೆ ಅರ್ಜಿ ಸ್ವೀಕರಿಸಲಾಗುತ್ತದೆ’ ಎಂದರು.

‘ಅರ್ಜಿಯ ಪ್ರತಿಯನ್ನು ಸಹಾಯಕ ನೋಂದಣಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಅರ್ಜಿದಾರರ ಹೆಸರು, ವಿಳಾಸ ಪರಿಶೀಲಿಸಿದ ಬಳಿಕ ಮತದಾ
ರರ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ. ಅರ್ಜಿದಾರರು ಸುಳ್ಳು ಮಾಹಿತಿ ನೀಡಿದ್ದರೆ ಅಥವಾ ವಿಳಾಸ ಸರಿ ಇರದಿದ್ದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ’ ಎಂದು ಹೇಳಿದರು.

‘ಬೂತ್‌ಮಟ್ಟದ ಅಧಿಕಾರಿಗಳು ವಿಶೇಷ ಆಂದೋಲನದಡಿ ಇದೇ 30ರವರೆಗೆ ಮನೆ ಮನೆಗೆ ತೆರಳಿ ಮತದಾರರ ಹೆಸರನ್ನು ಪಟ್ಟಿಗೆ ಸೇರ್ಪಡೆ ಮಾಡಲಿದ್ದಾರೆ. ಅರ್ಜಿ ತಿರಸ್ಕೃತಗೊಂಡವರು ಈ ವೇಳೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಯುವ ಮತದಾರರು ಪಟ್ಟಿಗೆ ಹೆಸರು ನೋಂದಾಯಿಸಬಹುದು. ಬೇರೆ ಕಡೆಯಿಂದ ಬಂದು ನಗರದಲ್ಲಿ ನೆಲೆಸಿರುವವರೂ ಹೊಸದಾಗಿ ಸೇರ್ಪಡೆ ಆಗಬಹುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.