ಬೆಂಗಳೂರು: ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯ ಕೆರೆಗಳ ಮೀಸಲು ಪ್ರದೇಶದಲ್ಲಿ (ಬಫರ್ ಜೋನ್) 87 ಕೈಗಾರಿಕೆಗಳಿವೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಕಾಂಗ್ರೆಸ್ನ ಪಿ.ಆರ್.ರಮೇಶ್ ಪ್ರಶ್ನೆಗೆ ಸಚಿವರು ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಕೆರೆಗಳಿಂದ 75 ಮೀಟರ್ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ನಿಗದಿಪಡಿಸಿ ರಾಷ್ಟ್ರೀಯ ಹಸಿರು ಪೀಠದ ನ್ಯಾಯಾಧೀಕರಣವು 2016ರ ಮೇ 4ರಂದು ಆದೇಶಿಸಿತ್ತು. ಇದರ ಪ್ರಕಾರ 75 ಮೀಟರ್ ಪರಿಮಿತಿಯಲ್ಲಿ 87 ಕೈಗಾರಿಕೆಗಳಿರುವುದನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 7,409 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 2,780 ಕಾರ್ಖಾನೆಗಳಿಂದ ಕಲುಷಿತ, ವಿಷಕಾರಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇವುಗಳಲ್ಲಿ 2,117 ಕಾರ್ಖಾನೆಗಳು ಶುದ್ಧೀಕರಣ ಘಟಕ ಅಳವಡಿಸಿಕೊಂಡಿದ್ದು, ತ್ಯಾಜ್ಯ ನೀರು ಶುದ್ಧೀಕರಿಸಿ ಮರು ಬಳಕೆ ಮಾಡಿಕೊಳ್ಳುತ್ತಿವೆ. 663 ಕಾರ್ಖಾನೆಗಳು ಕಲುಷಿತ ಮತ್ತು ವಿಷಕಾರಿ ತ್ಯಾಜ್ಯವನ್ನು ಪ್ರಾಥಮಿಕ ಹಂತದ ಸಂಸ್ಕರಣೆ ಮಾಡಿ, ಸಾಮಾನ್ಯ ಶುದ್ಧೀಕರಣ ಘಟಕಗಳಿಗೆ (ಸಿಇಟಿಪಿಎಸ್) ಕಳುಹಿಸಿ ಶುದ್ಧೀಕರಣ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.