ADVERTISEMENT

ನವ ಜೋಡಿಯಿಂದ ಶೌಚಾಲಯ ಉಡುಗೂರೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 7:04 IST
Last Updated 20 ನವೆಂಬರ್ 2017, 7:04 IST
ಔರಾದ್‌ ಹಮಾಲರ ಗಲ್ಲಿ ನಿವಾಸಿ ಗಣಪತಿ ಕೋಳಿ ಅವರಿಗೆ ಶಿವಾನಂದ ಮೊಕ್ತೆದಾರ ಕಟ್ಟಿಕೊಟ್ಟ ಶೌಚಾಲಯ
ಔರಾದ್‌ ಹಮಾಲರ ಗಲ್ಲಿ ನಿವಾಸಿ ಗಣಪತಿ ಕೋಳಿ ಅವರಿಗೆ ಶಿವಾನಂದ ಮೊಕ್ತೆದಾರ ಕಟ್ಟಿಕೊಟ್ಟ ಶೌಚಾಲಯ   

ಔರಾದ್: ಮದುವೆ ಮಂಟಪದಲ್ಲಿ ವಧು–ವರರಿಗೆ ಉಡುಗೂರೆ ಕೊಟ್ಟು ಶುಭ ಹಾರೈಸುವುದು ಸಾಮಾನ್ಯ. ಆದರೆ, ಇಲ್ಲಿಯ ನವ ಜೋಡಿಯೊಂದು ಉಡುಗೊರೆ ಸ್ವೀಕರಿಸುವುದಕ್ಕಿಂತ ಎರಡು ಬಡ ಕುಟುಂಬಗಳಿಗೆ ಶೌಚಾಲಯ ಸೌಲಭ್ಯ ಕಲ್ಪಿಸಿ, ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ.

ತೇಗಂಪುರ ಗ್ರಾಮದ ವೀರಶೆಟ್ಟಿ ಮೊಕ್ತೆದಾರ ಅವರ ಪುತ್ರ ಶಿವಾನಂದ ಮೊಕ್ತೆದಾರ ಹಾಗೂ ಔರಾದ್ ನಿವಾಸಿ ಕುಪೇಂದ್ರ ಹತ್ತೆ ಅವರ ಪುತ್ರಿ ನಂದಿನಿ ಅವರು ಇದೇ 21ರಂದು ನಡೆಯುವ ತಮ್ಮ ಮದುವೆ ಸಮಾರಂಭದಲ್ಲಿ ಈ ಕಾರ್ಯ ಮಾಡಲು ಸಿದ್ಧತೆ ನಡೆಸಿದ್ದಾರೆ.

ಅವರು ₹ 26 ಸಾವಿರ ಖರ್ಚು ಮಾಡಿ ಬೆಳಕುಣಿ ಗ್ರಾಮದ ಇಬ್ಬರು ಅಂಗವಿಕಲ ಮಕ್ಕಳನ್ನು ಹೊಂದಿರುವ ಬಡ ತಾಯಿ ಸೈನಾಜಬೀ ಹಾಗೂ ಔರಾದ್ ಪಟ್ಟಣದ ಹಮಾಲರ ಗಲ್ಲಿ ನಿವಾಸಿ ಗಣಪತಿ ಕೋಳಿ ಅವರ ಮನೆಯಲ್ಲಿ ಶೌಚಾಲಯ ಸೌಲಭ್ಯ ಕಲ್ಪಿಸಿದ್ದಾರೆ.

ADVERTISEMENT

ಇಷ್ಟೇ ಅಲ್ಲ, 30 ಮಂದಿ ವೃದ್ಧರಿಗೆ ಬೆಚ್ಚನೆ ಹೊದಿಕೆ, ತಾವು ಕಲಿತ ಸರ್ಕಾರಿ ಶಾಲೆಗೆ ಬಿಸಿಯೂಟದ ತಟ್ಟೆ ನೀಡಲಿದ್ದಾರೆ.  ಕೌಡಗಾಂವ್ ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಸಹ ಭರಿಸಲಿದ್ದಾರೆ.

‘ಆಡಂಬರದ ಮದುವೆ ಇಷ್ಟ ಇಲ್ಲ. ಬಟ್ಟೆಬರೆ ಸೇರಿದಂತೆ ಎಲ್ಲದಕ್ಕೂ ಖರ್ಚಿನ ಮಿತಿ ಹಾಕಿಕೊಂಡಿದ್ದೇವೆ. ಮದುವೆ (ಬಾರಾತ) ಮೆರವಣಿಗೆಯೂ ಇಲ್ಲ. ಹಣವನ್ನು ಉಳಿಸಿಕೊಂಡು ಒಳ್ಳೆ ಕಾರ್ಯಕ್ಕಾಗಿ ಬಳಸುತ್ತಿದ್ದೇನೆ’ ಎಂದು ಶಿವಾನಂದ ಮೊಕ್ತೆದಾರ ತಿಳಿಸಿದರು.

* * 

ಮದುವೆಯಂತಹ ಕಲ್ಯಾಣ ಕಾರ್ಯಕ್ರಮದಲ್ಲೂ ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರೇರಣೆ ಸಿಗುತ್ತಿರುವುದ ಹೆಮ್ಮೆಯ ಸಂಗತಿ. ಎರಡು ಬಡ ಕುಟುಂಬಗಳಿಗೆ ಶೌಚಾಲಯ ಕಟ್ಟಿಕೊಟ್ಟಿರುವುದು ಮಾದರಿ ಕೆಲಸ.
ಜಗನ್ನಾಥ ಮೂರ್ತಿ
ಇಒ ಔರಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.