ADVERTISEMENT

ನೌಕರರ ಮಕ್ಕಳಿಗಾಗಿ ಕಾಲೇಜು ಸ್ಥಾಪಿಸಿ

ಸರ್ಕಾರಿ ನೌಕರರ ಸ್ಪಂದನ ಕಾರ್ಯಾಗಾರ; ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 6:46 IST
Last Updated 6 ಜುಲೈ 2015, 6:46 IST

ಬೀದರ್: ರಾಜ್ಯ ಸರ್ಕಾರ ನೌಕರರ ಮಕ್ಕಳಿಗಾಗಿ ಪ್ರತ್ಯೇಕ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಬಿ.ಪಿ.ಮಂಜೇಗೌಡ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸರ್ಕಾರಿ ನೌಕರರ ಸ್ಪಂದನ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರಿ ನೌಕರರ ಮಕ್ಕಳಿಗೆ ಪ್ರತ್ಯೇಕ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜು ಆರಂಭಿಸಿದರೆ ಪ್ರತಿಯೊಬ್ಬರು ಪ್ರತಿ ವರ್ಷ ಒಂದು ದಿನದ ವೇತನ ಕೊಡಲು ಸಿದ್ಧರಿದ್ದಾರೆ. 3 ವರ್ಷಗಳ ಕಾಲ ಕೊಡುವ ಒಂದು ದಿನದ  ವೇತನದಿಂದ ಸಾಕಷ್ಟು ಹಣ ಲಭ್ಯವಾಗಲಿದೆ. ಇದರಿಂದ ಕಾಲೇಜಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಲಿದೆ. ಈ ದಿಸೆಯಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಹೈದರಾಬಾದ್್ ಕರ್ನಾಟಕದಲ್ಲಿ ಶೇ 40ರಷ್ಟು ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿಮಾಡಬೇಕು. 371ಜೆ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ತಾಂತ್ರಿಕ ಅಡಚಣೆಗಳು ಕಂಡು ಬರುತ್ತಿದ್ದು, ಅವುಗಳನ್ನು ಸರ್ಕಾರ ನಿವಾರಿಸಬೇಕು. ಬೀದರ್್ ಪಟ್ಟಣಕ್ಕೆ ಸಾಮಾನ್ಯ ದರ್ಜೆ ನೀಡಿರುವುದರಿಂದ ಸರ್ಕಾರಿ ನೌಕರರಿಗೆ ಎಚ್್.ಆರ್.ಎ ಕಡಿಮೆ ಬರುತ್ತಿದೆ. ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ಎಚ್‌.ಕೆ.ರಾಮು, ಪ್ರಧಾನ ಕಾರ್ಯದರ್ಶಿ ಬಿ.ಎಂ. ಪಟೇಲ ಪಾಂಡು, ಖಜಾಂಚಿ ಯೋಗಾನಂದ. ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಕೇಂದ್ರ ಸಮಿತಿಯ ಮಹೇಶಕುಮಾರ, ಜೆ. ಮಂಜುನಾಥ, ಬಿ.ಕೆ.ಮಹೇಶ, ಬಸವರಾಜ್ ಎಸ್.ಮೋಹನ್,  ಅಣ್ಣಿಗೇರಿ ಉಪಸ್ಥಿತರಿದ್ದರು.

ಸರ್ಕಾರಿ ನೌಕರರು ಬೈಕ್ ರ‍್ಯಾಲಿ ಮೂಲಕ ಪದಾಧಿಕಾರಿಗಳನ್ನು ಬರಮಾಡಿಕೊಂಡರು. ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ ತಂಡದವರು ಭರತನಾಟ್ಯ ಪ್ರದರ್ಶಿಸಿದರು. ಶಿವಕುಮಾರ ಪಾಂಚಾಳ, ಬಿರಾದಾರ ಸಂಗೀತ ಕಾರ್ಯಕ್ರಮ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.