ADVERTISEMENT

ಸಂಚಾರ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 4:44 IST
Last Updated 19 ನವೆಂಬರ್ 2017, 4:44 IST
ಬೀದರ್‌ನ ಉದಗಿರ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಮಾರ್ಕಿಂಗ್‌ ಮಾಡಲಾಗಿದೆ
ಬೀದರ್‌ನ ಉದಗಿರ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಮಾರ್ಕಿಂಗ್‌ ಮಾಡಲಾಗಿದೆ   

ಬೀದರ್‌: ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರದೆಲ್ಲಡೆ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಒಂದು ದಿನ ರಸ್ತೆಯ ಈ ಬದಿ, ಮರುದಿನ ಆಚೆ ಬದಿಗೆ ವಾಹನಗಳ ಪಾರ್ಕಿಂಗ್‌ಗೆ ಜಾಗ ಗುರುತಿಸಲಾಗಿದೆ.

ಮೊದಲ ಹಂತವಾಗಿ ನಯಾ ಕಮಾನ್‌ನಿಂದ ಚೌಬಾರಾ, ಚೌಬಾರಾದಿಂದ ಗವಾನ್‌ಚೌಕ್, ಅಂಬೇಡ್ಕರ್‌ ವೃತ್ತದಿಂದ ಗವಾನ್‌ ಚೌಕ್‌ ವರೆಗಿನ ರಸ್ತೆಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ನಯಾ ಕಮಾನ್‌ದಿಂದ ಚೌಬಾರಾ ವರೆಗಿನ ರಸ್ತೆಯಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ವಿಸ್ತರಿಸಿ ಪಾದಚಾರಿ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿದ್ದರು. ಪಾದಚಾರಿ ರಸ್ತೆಯಲ್ಲಿ ಕಟ್ಟೆಗಳನ್ನು ನಿರ್ಮಿಸಿದ್ದ ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಅತಿಕ್ರಮಣ ತೆರವುಗೊಳಿಸಲಾಗಿದೆ.

ADVERTISEMENT

ತಳ್ಳುಗಾಡಿಯ ಮೇಲೆ ಹಣ್ಣು ಹಾಗೂ ತರಕಾರಿ ಮಾರಾಟ ಮಾಡುವವರಿಗೆ ರಸ್ತೆ ಮೇಲೆ ನಿಂತು ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ನಯಾ ಕಮಾನ್‌ ಪಕ್ಕದಲ್ಲಿನ ಒಂದು ಎಕರೆ ಜಾಗದಲ್ಲಿ ತಳ್ಳುಗಾಡಿಯವರಿಗೆ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಡಲಾಗಿದೆ.

ಮಡಿವಾಳ ವೃತ್ತದಿಂದ ಕೇಂದ್ರ ಬಸ್‌ ನಿಲ್ದಾಣದ ವರೆಗೆ ರಸ್ತೆಯ ಎರಡೂ ಬದಿಗೆ ಪಾರ್ಕಿಂಗ್‌ಗೆ ಗೆರೆ ಹಾಕಲಾಗಿದೆ. ಗೆರೆಯ ಒಳಗಡೆ ವಾಹನಗಳನ್ನು ನಿಲುಗಡೆ ಮಾಡದಂತೆ ಸೂಚನೆ ನೀಡಲಾಗಿದೆ.

‘ನಗರದಲ್ಲಿ ಜನದಟ್ಟಣೆ ಇರುವ ಪ್ರದೇಶದಲ್ಲಿ ನಗರಸಭೆ ಪಾದಚಾರಿ ರಸ್ತೆ ನಿರ್ಮಿಸಲಿದೆ. ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪಾದಚಾರಿ ರಸ್ತೆ ನಿರ್ಮಿಸುವ ದಿಸೆಯಲ್ಲಿ ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ತಿಳಿಸಿದ್ದಾರೆ.

ಹರಳಯ್ಯ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಹಾಗೂ ಕನ್ನಡಾಂಬೆ–ರೋಟರಿ ವೃತ್ತದಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ವೃತ್ತದಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರಕ್ಕೆ ತಡೆ ಉಂಟು ಮಾಡುವ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ಸೂಚನಾ ಫಲಕ ಅಳವಡಿಸಲು ನಗರಸಭೆ ₹12 ಲಕ್ಷ ಅನುದಾನ ನೀಡಿದೆ. ಸೂಚನಾ ಫಲಕ ಅಳವಡಿಸಿದ ನಂತರ ಹೊರಗಡೆಯಿಂದ ನಗರಕ್ಕೆ ಬರುವವರಿಗೂ ಸಂಚಾರ ಮಾರ್ಗಗಳ ಸ್ಪಷ್ಟ ಚಿತ್ರಣ ದೊರೆಯಲಿದೆ.

‘ನಗರಸಭೆಯಿಂದ ನಗರದಲ್ಲಿ 13 ಬಸ್‌ ತಂಗುದಾಣ ನಿರ್ಮಾಣ ಮಾಡಲಾಗುವುದು.ಈಗಾಗಲೇ ಟೆಂಡರ್‌ ಸಹ ಕರೆಯಲಾಗಿದೆ. ಎಂಟು ಕಡೆ ಆಟೊ ನಿಲ್ದಾಣಕ್ಕೆ ಜಾಗ ಗುರುತಿಸಲಾಗಿದೆ’ ಎಂದು ತಿಳಿಸಿದ್ದಾರೆ.

* * 

ನಗರದಲ್ಲಿ ವಾಹನಗಳ ನಿಲುಗಡೆಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗುತ್ತಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ಡಿ.ದೇವರಾಜ್‌ ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.