ADVERTISEMENT

31ರ ಒಳಗೆ ಜೆಡಿಎಸ್ ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 23 ಮೇ 2017, 7:10 IST
Last Updated 23 ಮೇ 2017, 7:10 IST

ಬೀದರ್: ಮೇ 31 ರ ಒಳಗೆ ಜಾತ್ಯತೀತ ಜನತಾ ದಳದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ವೀಕ್ಷಕರೂ ಆದ ಜಾತ್ಯತೀತ ಜನತಾ ದಳದ ರಾಜ್ಯ ಘಟಕದ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ತಿಳಿಸಿದರು.

ನಗರದ ಸಪ್ನಾ ಇಂಟರ್‌ನ್ಯಾಷನಲ್‌ನಲ್ಲಿ ಸೋಮವಾರ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, 2018 ರ ವಿಧಾನಸಭೆ ಚುನಾವಣೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೆಚ್ಚು ಶಾಸಕರನ್ನು ಗೆಲ್ಲಿಸಿ ತರಲು ಈಗಾಗಲೇ ಸಿದ್ಧತೆ ಆರಂಭಿಸಲಾಗಿದೆ. ಸಂಘಟನೆ ಬಲವರ್ಧನೆಗೆ ಪ್ರತಿ ಜಿಲ್ಲೆಗೆ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಹೇಳಿದರು.

ಪಕ್ಷದ ಕಾರ್ಯಕರ್ತರು ಸಂಘಟನೆ ಬಲಪಡಿಸಲು ಒತ್ತು ಕೊಡಬೇಕು. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸಬೇಕು. ಕಾರ್ಯಕರ್ತರ ಸಮಸ್ಯೆಗಳಿದ್ದರೆ ನೇರವಾಗಿ ತಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ADVERTISEMENT

ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ನಿರೀಕ್ಷೆ ಇದೆ. ಕಾರ್ಯಕರ್ತರು ಚುನಾವಣೆಯನ್ನು ದೃಷ್ಟಿಕೋನದಲ್ಲಿ ಇಟ್ಟುಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳ ಹೆಸರುಗಳ ಪಟ್ಟಿಯನ್ನು ಮುಖಂಡರಿಗೆ ಕೊಡಲಾಗಿದೆ. ಕಾರಣಾಂತರದಿಂದ ನೇಮಕ ತಡವಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ನಸೀಮುದ್ದೀನ್ ಪಟೇಲ್ ತಿಳಿಸಿದರು.

ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ ಸಂಘಟನೆ ಬಲಪಡಿಸಲು ಕ್ಷೇತ್ರ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಜಿಲ್ಲಾ ಘಟಕದ ವಕ್ತಾರ ಅಶೋಕಕುಮಾರ ಕರಂಜಿ ಕೋರಿದರು.

ಮುಖಂಡರಾದ ಕೇಶಪ್ಪ ಬಿರಾದಾರ, ಶಬ್ಬೀರ್ ಮಿಯ, ಜಿಲ್ಲೆಯ ವೀಕ್ಷಕರಾದ ಬಸವರಾಜ ಪಾದಯಾತ್ರಿ, ಶಿವರಾಜ ಹುಲಿ, ಸಿದ್ರಾಮಪ್ಪ ವಂಕೆ, ಐಲಿನ್‌ಜಾನ್ ಮಠಪತಿ ಮಾತನಾಡಿದರು.

ಪ್ರಮುಖರಾದ ರಮೇಶ ಪಾಟೀಲ, ರಾಜಶೇಖರ ಜವಳೆ, ರಾಜು ಚಿಂತಾಮಣಿ, ರಾಜು ಕಡ್ಯಾಳ, ಸುರೇಶ ಶಿಗಿ, ಜನಾರ್ಧನ ಬಿರಾದಾರ, ತಾನಾಜಿ ತೋರಣೆಕರ್, ಬಾಬು ಮಲ್ಕಾಪುರೆ, ದತ್ತಾತ್ರಿ ಧತ್ತುರೆ, ಜೋಸೆಫ್ ಕೊಡ್ಡಿಕರ್ ಇದ್ದರು. ಸೋಮನಾಥ ಕಂದಗೂಳೆ ನಿರೂಪಿಸಿದರು. ಅಶೋಕ ಕೋಡಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.