ADVERTISEMENT

ಭೀಮಾತೀರದ ಪ್ರಕರಣಗಳಿಗೆ ಅನಕ್ಷರತೆ ಕಾರಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 7:26 IST
Last Updated 24 ಜನವರಿ 2018, 7:26 IST

ಇಂಡಿ: ಭೀಮಾತೀರ ಮತ್ತು ಗಡಿ ಭಾಗದಲ್ಲಿ ಅಫರಾದ ಪ್ರಕರಣಗಳು ಸಂಭವಿಸಲು ಅನಕ್ಷರತೆ ಮೂಲ ಕಾರಣ ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಅಲೋಕಕುಮಾರ ಹೇಳಿದರು.

ಪಟ್ಟಣದ ಪೊಲೀಸ್ ಪರೇಡ ಮೈದಾನದಲ್ಲಿ ಮಂಗಳವಾರ ನಡೆದ ಅಕ್ಷರಕ್ಕಾಗಿ ಆರಕ್ಷಕರು, ನೊಂದವರ ದಿನಾಚರಣೆ ಮತ್ತು ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಭೀಮಾತೀರ ಎಂಬ ಹೆಸರು ಮಾಧ್ಯಮಗಳಿಂದ ಬಂದಿರಬಹುದು. ಆದರೆ, ಅಫಜಲಪೂರ, ಇಂಡಿ ಭೀಮಾತೀರದ ಭಾಗದಲ್ಲಿ ಹೃದಯ ಶ್ರೀಮಂತರು, ಮುಗ್ದ ಜನರಿದ್ದಾರೆ ಎಂಬುದು ಪ್ರವಾಸದ ವೇಳೆ ತಿಳಿದುಕೊಂಡಿದ್ದೇನೆ ಎಂದರು.

ಇಲ್ಲಿನ ಜನರು ಹೊಟ್ಟೆ ಪಾಡಿಗಾಗಿ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿರುವದು ಅನಿವಾರ್ಯ. ಈ ಅಲೆಮಾರಿ ಹಾಗೂ ವಲಸೆ ಹೋಗುವ ಜನರು ಇರುವುದರಿಂದ ಅನೇಕ ಮಕ್ಕಳು ಶಾಲೆಯಿಂದ ಹೊರಗುಳಿದು ಅನಕ್ಷರಸ್ಥರಾಗಿದ್ದಾರೆ. ಅಫರಾದಗಳು ತಿಳಿದು ತಿಳಿಯದೆ ನಡೆಯಬಹುವುದು. ನಿಮ್ಮಷ್ಠಕ್ಕೆ ನೀವು ಅಪರಾಧಿಗಳಾಗಿ ಜೈಲು ಅನುಭವಿಸಿ, ಮಕ್ಕಳನ್ನು ಇಂಥ ಕ್ರೀಮಿನಲ್ ಚಟುವಟಿಕೆಗಳಲ್ಲಿ ತೊಡಗದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಪೊಲೀಸ್ ಇಲಾಖೆಯ ಮೂಲಕ ಪ್ರತಿ ಗ್ರಾಮಗಳಲ್ಲಿ ಸಂಚರಿಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗರುತಿಸಲಾಗಿದೆ. ಅಂತಹ ಮಕ್ಕಳಿಗೆ ಶಾಲೆಗೆ ಹೋಗದಿದ್ದರೆ ಜೈಲಿಗೆ ಹಾಕಲಾಗುವುದು ಎಂದು ಹೆದರಿಕೆ ಹಾಕುವ ಮೂಲಕ ಮಕ್ಕಳನ್ನು ಶಾಲೆಗೆ ಸೇರಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಟಕಾ, ಗಾಂಜಾ, ಅಕ್ರಮ ಮರಳು ಸಾಗಾಣಿಕೆಗಳ ಬಗ್ಗೆ ದೂರುಗಳು ಬಂದಿವೆ. ಸರಿಯಾದ ಸಾಕ್ಷಿ ಸಮೇತ ಈ ಅಕ್ರಮಗಳು ಸಿಕ್ಕರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಜ.26 ರಿಂದ ಹೆಲ್ಮೆಟ್‌ ಕಡ್ಡಾಯಗೊಳಿಸಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಅದರಂತೆ ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು. ಸಂಚಾರ ನಿಯಮ ಪಾಲಿಸಬೇಕು. ಇಲ್ಲದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾವುದು ಎಂದು ಎಚ್ಚರಿಸಿದರು.

ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕುಲದೀಪಕುಮಾರ ಜೈನ್‌, ಉಪ ವಿಭಾಗಾಧಿಕಾರಿ ಡಾ.ಪಿ.ರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಟಿ.ತಳಕೇರಿ ಮಾತನಾಡಿರು. ಅಧಿಕಾರಿಗಳಾದ ಶ್ರೀನಿವಾಸಗೌಡ, ರವೀಂದ್ರ ಶಿರೂರ, ಮಹಮ್ಮದ ಇಕ್ರಾಂ ಶರೀಫ, ಚಂದ್ರಶೇಖರ ನಂದರಡ್ಡಿ ಉಪಸ್ಥಿತರಿದ್ದರು.

ಗ್ರಾಮೀಣ ಪಿಎಸ್‌ಐ ಶಿವಾನಂದ ಮುಚ್ಚಂಡಿ ಸ್ವಾಗತಿಸಿದರು. ಶಿಕ್ಷಕ ಐ.ಎಸ್.ಹೂಗಾರ ನಿರೂಪಿಸಿದರು. ನಗರ ಆರಕ್ಷಕ ಅಧಿಕಾರಿ ರವಿ ಯಡ್ಡಣ್ಣವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.