ADVERTISEMENT

68 ಸಾವಿರ ಕ್ವಿಂಟಲ್‌ ಬೀಜ ವಿತರಣೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 6:28 IST
Last Updated 5 ಸೆಪ್ಟೆಂಬರ್ 2017, 6:28 IST

ಕಮಲನಗರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ ಬೀಜ ನಿಗಮದ ವತಿಯಿಂದ ಜಿಲ್ಲೆಯಲ್ಲಿ ಸುಮಾರು 68 ಸಾವಿರ ಕ್ವಿಂಟಲ್‌ ಬೀಜ ವಿತರಣೆ ಮಾಡಲಾಗಿದೆ ಎಂದು ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಶಿವಮೂರ್ತೆಪ್ಪ ಹೇಳಿದರು.

ಸಮೀಪದ ಖೇಡ್‌ ಗ್ರಾಮದ ಶ್ರೀವಲ್ಲಭ ಮಲಾನಿ ಅವರ ಹೊಲದಲ್ಲಿ ರಾಜ್ಯ ಬೀಜ ನಿಗಮದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಸೋಯಾಬಿನ್‌ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘67.21 ಸಾವಿರ ಕ್ವಿಂಟಲ್‌ ಸೋಯಾಬಿನ್‌ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ. ಸರ್ಕಾರದಿಂದ ವಿತರಿಸುವ ಗುಣಮಟ್ಟದ ಸೋಯಾಬಿನ್‌ ಬೀಜ ಬಿತ್ತಿ ಹೆಚ್ಚು ಇಳುವರಿ ಜತೆಗೆ ಆರ್ಥಿಕವಾಗಿ ಸದೃಢರಾಗಬೇಕು’ ಎಂದರು.

ADVERTISEMENT

‘ರೈತರು ಮುಂಗಾರು ಹಾಗೂ ಹಿಂಗಾರು ಬಿತ್ತನೆ ಬೀಜಗಳಿಗಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗದಂತೆ ಸಹಕಾರ ಸಂಘಗಳ ಮೂಲಕವೂ ಬೀಜ ವಿತರಿಸಲು ಸರ್ಕಾರ ಕ್ರಮ ಕೈಗೊಂಡಿದೆ’ ಎಂದು ಹೇಳಿದರು.

‘ಪ್ರಮಾಣಿಕೃತ ಬೀಜ ಸಂಸ್ಕರಣೆ ಹಾಗೂ ವಿತರಣೆಗಾಗಿ ರಾಜ್ಯದಲ್ಲಿಯೇ ಬೀದರ್‌ ಜಿಲ್ಲೆಯನ್ನು ಮಾದರಿಯನ್ನಾಗಿಸಿಕೊಂಡು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ’ ಎಂದು ತಿಳಿಸಿದರು.

ಬೀಜ ನಿಗಮದ ನಿರ್ದೇಶಕ ಐ.ಎಸ್‌.ಪಾಟೀಲ ಮಾತನಾಡಿ, ‘ಬೀಜ ಸಂಸ್ಕರಣಾ ಘಟಕಗಳ ಸಾಮರ್ಥ್ಯ ಹೆಚ್ಚಿಸಲು ಬೀಜ ನಿಗಮ ಮುಂದಾಗಿದ್ದು, 20 ಸಾವಿರ ಕ್ವಿಂಟಲ್‌ ಬೀಜ ಸಂಸ್ಕರಣೆ ಮಾಡುವ ಅತ್ಯಾಧುನಿಕ ಯಂತ್ರ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರವಿ ದೇಶಮುಖ್‌ ಮಾತನಾಡಿ, ‘ಅಂತರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡಿರುವ ರೈತ ಶ್ರೀವಲ್ಲಭ ಮಲಾನಿ ಅವರು ಬೆಳೆದ ಸೋಯಾಬಿನ್‌ ಬೆಳೆ ಉತ್ತಮ ಇಳುವರಿ ನೀಡಲಿದೆ’ ಎಂದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ, ಬೀಜ ನಿಗಮದ ನಿರ್ದೇಶಕ ಡಿ.ಎಲ್‌.ನಾಗರಾಜ ಮಾತನಾಡಿದರು.

ಬೀಜ ನಿಗಮದ ಜಿಲ್ಲಾ ವ್ಯವಸ್ಥಾಪಕ ಅನಿಲ್‌ ಬಿರಾದಾರ್‌, ಪ್ರಧಾನ ವ್ಯವಸ್ಥಾಪಕ ಬೊಮ್ಮಯ್ಯ, ನಿರ್ದೇಶಕ ಸಿದ್ಧಲಿಂಗಪ್ಪಾ ಹೊಸಮನಿ, ರಾಜೇಂದ್ರ ಪ್ರಸಾದ್‌, ಎಸ್‌, ಜಿ.ಚಿಮಕೋಡೆ, ಪ್ರಮಾಣಿಕೃತ ಬೀಜ ವಿತರಣೆ ಕೇಂದ್ರದ ಸಹಾಯಕ ನಿರ್ದೇಶಕ ಗುರುಬಸವರಾಜ್‌, ಮುಖಂಡ ಮಲ್ಲಪ್ಪಾ ದಾನಾ, ರೈತ ಶ್ರೀವಲ್ಲಭ ಮಲಾನಿ, ಪ್ರೇಮ ಪಾಟೀಲ, ಶಿವಕುಮಾರ ಬಳಕಟ್ಟೆ, ವೀರೇಂದ್ರ ಬಿರಾದಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.