ADVERTISEMENT

ಆದಾಯ ಹೆಚ್ಚಿಸಲು ಗ್ರಾ.ಪಂ ವಿಫಲ: ದೂರು

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 7:20 IST
Last Updated 4 ಜುಲೈ 2017, 7:20 IST

ಹನೂರು: ಸಾರ್ವಜನಿಕ ಆಸ್ತಿ ರಕ್ಷಣೆ ಮತ್ತು ಪಂಚಾಯಿತಿ ಆದಾಯ ಹೆಚ್ಚಿಸುವಲ್ಲಿ ಅಜ್ಜೀಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಸವಿತಾ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಾಜಾನ್ ಅವರು  ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಗ್ರಾ.ಪಂ. ಮತ್ತು ತಾ.ಪಂ. ಅನುದಾನದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 17 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಮಾಸಿಕ ಬಾಡಿಗೆಗೆ ನೀಡಲಾಗಿತ್ತು. ಆದರೆ ಸಮರ್ಪಕವಾಗಿ ಬಾಡಿಗೆ ವಸೂಲಾತಿ ಮಾಡಿಲ್ಲ, ಇದಕ್ಕೆ ಸಂಬಂಧಿಸಿದಂತೆ ಕೆಲವು ಬಾಡಿಗೆದಾರರು ನ್ಯಾಯಾಲಯ ಮೆಟ್ಟಿಲೇರಿದ್ದರು.

ನ್ಯಾಯಾಲಯವು ಗ್ರಾಮ ಪಂಚಾಯಿತಿ ಪರವಾಗಿ ತೀರ್ಪು  ನೀಡಿದ್ದರೂ ಸಂಬಂಧಿಸಿದವರು ಬಾಡಿಗೆ ವಸೂಲಾತಿಗೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈ ಕೂಡಲೇ ಗ್ರಾಮ ಪಂಚಾಯಿತಿ ವಾಣಿಜ್ಯ ಮಳಿಗೆಯ ಬಾಡಿಗೆದಾರರಿಂದ ಕಡ್ಡಾಯವಾಗಿ ಮಾಸಿಕ ಬಾಡಿಗೆಯನ್ನು ವಸೂಲಿ ಮಾಡಿ ಗ್ರಾಮ ಪಂಚಾಯಿತಿ ಆದಾಯ ಹೆಚ್ಚಿಸಲು ಕ್ರಮಕೈಗೊಳ್ಳಬೇಕು ತಪ್ಪಿದ್ದಲ್ಲಿ  ಮಳಿಗೆಗಳನ್ನು ಮರು ಹಂಚಿಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ADVERTISEMENT

ಅಜ್ಜೀಪುರ ಗ್ರಾಮದಲ್ಲಿ  ವಿವಿಧೆಡೆ ಸರ್ಕಾರಿ ಜಾಗವನ್ನು 77 ವ್ಯಕ್ತಿಗಳಿಗೆ ನೆಲ ಬಾಡಿಗೆ ನೀಡಲಾಗಿದೆ. ಬಾಡಿಗೆ ಸಹ ವಸೂಲಿ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಕುರುಬರದೊಡ್ಡಿ ಗ್ರಾಮದಲ್ಲಿ 3 ವರ್ಷಗಳ ಹಿಂದೆ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ 3 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ಇದುವರೆಗೂ ಅವುಗಳನ್ನು ಬಾಡಿಗೆಗೆ ನೀಡಿಲ ಎಂದು ಹೇಳಿದ್ದಾರೆ.

ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ, ಗ್ರಂಥಾಲಯ, ಬಸ್‌ ನಿಲ್ದಾಣ, ಸಮುದಾಯ ಭವನ, ವಿದ್ಯುತ್ ಉಪಕೇಂದ್ರ, ಮತ್ತು ಸಾರ್ವಜನಿಕ ಹಾಸ್ಟೆಲ್ ನಿರ್ಮಾಣಕ್ಕೆ ಖಾಲಿ ಜಾಗವನ್ನು ನಿಗದಿಪಡಿಸಬೇಕೆಂದು ಸದಸ್ಯರಾದ ರುದ್ರನಾಯಕ್, ಮಾದಪ್ಪ, ಸತೀಶ್, ಪ್ರೇಮ, ರಾಜು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.