ADVERTISEMENT

‘ಕ್ರೌರ್ಯ ನಿಲ್ಲಿಸಿ, ಅತ್ಯಾಚಾರಿಗಳನ್ನ ಶಿಕ್ಷಿಸಿ’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 6:48 IST
Last Updated 22 ಡಿಸೆಂಬರ್ 2017, 6:48 IST
ಕಲಬುರ್ಗಿಯಲ್ಲಿ ಗುರುವಾರ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು (ಎಡಚಿತ್ರ). ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು
ಕಲಬುರ್ಗಿಯಲ್ಲಿ ಗುರುವಾರ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು (ಎಡಚಿತ್ರ). ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು   

ಕಲಬುರ್ಗಿ: ವಿಜಯಪುರದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು. ‘ಈ ಕ್ರೌರ್ಯ ನಿಲ್ಲಿಸಿ, ಅತ್ಯಾಚಾರಿ–ಕೊಲೆಗಡುಕರನ್ನು ಶಿಕ್ಷಿಸಿ’ ಎಂದು ಆಗ್ರಹಿಸಿದವು.

‘ರಾಜ್ಯದ ಹೆಣ್ಣುಮಕ್ಕಳು ಘನತೆಯಿಂದ ಬದುಕುವ ವಾತಾವರಣ ನಿರ್ಮಿಸಬೇಕಾದದ್ದು ಸರ್ಕಾರದ ಹೊಣೆ. ಮಹಿಳೆಯರ ಮೇಲೆ ಅತ್ಯಾಚಾರವೆಸಗುವ ಮನಸ್ಥಿತಿ ಅತ್ಯಂತ ಅಪಾಯಕಾರಿ. ಈಗ ಬಂಧಿತರಾದ ಆರೋಪಿಗಳ ಹಿನ್ನೆಲೆ ಗಮನಿಸಿದರೆ ಅವರು ಕೋಮುವಾದಿಗಳು ಎಂಬುದು ಗೊತ್ತಾಗಿದೆ’ ಎಂದು ದೂರಿದರು.

‘ರಾಜ್ಯದಲ್ಲಿ ಅತ್ಯಾಚಾರ, ಕೊಲೆ, ದೌರ್ಜನ್ಯ ತಡೆಗಟ್ಟಬೇಕು. ಸಮಾಜದ ಮೇಲೆ ಹೇರಲಾಗುತ್ತಿರುವ ಮನುಸ್ಮೃತಿಯ ಮಹಿಳಾ ವಿರೋಧಿ ಮೌಲ್ಯಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ಜನವಾದಿ ಮಹಿಳಾ ಸಂಘಟನೆ, ಪ್ರಜ್ಞಾ ಕಾನೂನು ಸಲಹಾ ಸಮಿತಿ, ಬಿಸಿಲು ಬೆಳದಿಂಗಳು ಯುವ ಬರಹಗಾರರ ಮತ್ತು ಓದುಗರ ವೇದಿಕೆ, ಭಾರತ ಜ್ಞಾನ ವಿಜ್ಞಾನ ಸಮಿತಿ, ದಲಿತ ಸಂಘರ್ಷ ಸಮಿತಿ, ಸಾಮಾಜಿಕ ಪರಿವರ್ತನಾ ಜನಾಂದೋಲನ, ಬಸವ ಕೇಂದ್ರ, ಲಿಂಗಾಯತ ಸಮನ್ವಯ ಸಮಿತಿ, ಮುಸ್ಲಿಂ ನೌಕರರ ಸಂಘಟನೆಯವರು ಜಂಟಿಯಾಗಿ ಈ ಪ್ರತಿಭಟನೆ ನಡೆಸಿದರು.

ಅರ್ಜುನ ಭದ್ರೆ, ಮಲ್ಲೇಶಿ ಸಜ್ಜನ, ಡಾ.ಕಾಶಿನಾಥ ಅಂಬಲಗಿ, ಚಂದಮ್ಮ ಗೋಳಾ, ನೀಲಾ ಕೆ., ಶೋಭಾ ಬಾಣಿ, ವಿಠಲ ಚಿಕಣಿ, ಅಶ್ವಿನಿ ಮದನಕರ್, ಅಶ್ವಿನಿ ಮಾವಿನಕರ್, ರವೀಂದ್ರ ಶಾಬಾದಿ, ಶಿವಶರಣ ಮುಳೆಗಾಂವ್, ರೇವಣಸಿದ್ದ ಕಲಬುರಗಿ, ಡಾ.ಅಶೋಕ ಶಟಕಾರ, ಬಸವರಾಜ ಕಾಮಾಜಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಎಸ್‌ಸಿ ಮೋರ್ಚಾ: ವಿಜಯಪುರದಲ್ಲಿ ವಿದ್ಯಾರ್ಥಿನಿ ಅತ್ಯಾಚಾರ–ಕೊಲೆ ಪ್ರಕರಣ ಖಂಡಿಸಿ ಬಿಜೆಪಿ ಮಹಾನಗರ ಜಿಲ್ಲಾ ಎಸ್.ಸಿ.ಮೋರ್ಚಾ ವತಿಯಿಂದ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

‘ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತವರೂರಲ್ಲೇ ಈ ಘಟನೆ ನಡೆದಿದ್ದು, ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿದರು.

ಅಧ್ಯಕ್ಷ ಅವಿನಾಶ ಬಿ. ಗಾಯಕವಾಡ, ಶಿವಯೋಗಿ ನಾಗನಹಳ್ಳಿ, ಶ್ಯಾಮರಾವ ಪ್ಯಾಟಿ, ಧರ್ಮಣ್ಣ ಇಟಗಾ, ಸಂತೋಷ ಹಾದಿಮನಿ, ವಿಶಾಲ ಧರ್ಗಿ, ಸಿದ್ಧಾರ್ಥ ಬಸರಿಗಿಡ, ಮದನ ಬಂಡೆ, ವಿಕಾಸ ಕರಣಿಕ, ಲಕ್ಷ್ಮಣ ಮೂಲಭಾರತಿ, ವಿಜಯಲಕ್ಷ್ಮಿ ಗೊಬ್ಬುರಕರ್, ಕುಮಾರ ವಠಾರ, ಕಪಿಲ ಕಲಕೇರಿ, ವಿಜಯಲಕ್ಷ್ಮಿ ರಾಗಿ, ಸಂಗಮೇಶ ರಾಜೋಳೆ, ದೇವೀಂದ್ರ ಸಿರನೂರ, ಚನ್ನಪ್ಪ ಸುರಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.