ಯಳಂದೂರು: ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಖಂಡಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿಯ ಕಾರ್ಯರ್ತರು ಗುರುವಾರ ಪ್ರತಿಭಟನೆ ನಡೆಸಿದರು. ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕಂದಹಳ್ಳಿ ನಾರಾಯಣ ಅವರು, ಕೇಂದ್ರ ಸರ್ಕಾರ ದೇಶದ ಬಹುಸಂಖ್ಯಾತ ಜನರ ಆಹಾರಪದ್ಧತಿ ನಿಲ್ಲಿಸಲು ಹೊರಟಿರುವುದು ಖಂಡನೀಯ ಎಂದರು.
ಗೋಮಾಂಸ ಕಡಿಮೆ ಬೆಲೆಗೆ ಸಿಗುವ ಪೌಷ್ಟಿಕ ಆಹಾರ. ದನದ ಚರ್ಮ, ಮೂಳೆ, ಕೊಂಬು, ಗೊರಸು, ಕೊಬ್ಬು ಬಳಸಿ ವಿವಿಧ ಔಷಧ ತಯಾರಿಕೆಯೂ ಆಗುತ್ತಿದೆ ಎಂಬುದನ್ನು ಮನಗಾಣಬೇಕು ಎಂದರು.
ಇಷ್ಟೆಲ್ಲ ಅನುಕೂಲ, ಆಹಾರ ಪದ್ಧತಿ ವ್ಯಕ್ತಿಗತ ಆಗಿದ್ದರೂ ಕೇಂದ್ರ ಸರ್ಕಾರರ ಗೋಹತ್ಯೆ ನಿಷೇಧಿಸಲು ಮುಂದಾಗಿರುವುದು ಪೂರ್ವಗ್ರಹ ಪೀಡಿತ ಮನೋಭಾವವಾಗಿದೆ ಎಂದು ಆರೋಪಿಸಿದರು.
ಮೈಸೂರಿನ ಕಲಾಮಂದಿರದ ಮನೆಯಂಗಳ ಆವರಣದಲ್ಲಿ ನಡೆದ ‘ಆಹಾರದ ಹಕ್ಕು ಮತ್ತು ರೂಢಿ’ ಸಂವಾದ ಕಾಯಕ್ರಮದಲ್ಲಿ ಗೋಮಾಂಸ ಸೇವನೆ ಖಂಡಿಸಿ ಗಂಜಲ ಸಿಂಪಡಿಸಿದ ಬಿಜೆಪಿ ಕಾರ್ಯಕರ್ತರ ಧೋರಣೆಯೂ ಖಂಡನಾರ್ಹ ಎಂದು ಟೀಕಿಸಿದರು.
ಈ ಬಗ್ಗೆ ತಹಶೀಲ್ದಾರ್ ಕೆ. ಚಂದ್ರಮೌಳಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಧ್ವನಿವರ್ಧಕ ಬಳಸಲು ಅವಕಾಶ ನೀಡದ ಉಪ ವಿಭಾಗಾಧಿಕಾರಿ ರೂಪಾ, ತಹಶೀಲ್ದಾರ್ ಕೆ. ಚಂದ್ರಮೌಳಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಶಿವಸ್ವಾಮಿ ಕ್ರಮ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಮೈಸೂರು ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ತಾಲ್ಲೂಕು ಸಂಘಟನಾ ಸಂಚಾಲಕ ಎಂ. ಪುಟ್ಟಸ್ವಾಮಿ, ಹೊನ್ನೂರು ನಿಂಗರಾಜು, ನಟರಾಜು, ಕುಮಾರ್, ಸೋಮಣ್ಣ, ಎಡತೊರೆ ಮಹದೇವಯ್ಯ, ಕೆ.ವಿ. ದೇವೇಂದ್ರ, ಎಸ್ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬ್ರಾರ್ ಅಹ್ಮದ್, ಹೊನ್ನೂರು ಮಲ್ಲರಾಜು, ನಂಜುಂಡಸ್ವಾಮಿ, ಆಟೊ ರಂಗಸ್ವಾಮಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಮಲಾಕ್ಷಿ, ಮರಮ್ಮ, ಬಸಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.