ADVERTISEMENT

ಚಿಕ್ಕಲ್ಲೂರು ಜಾತ್ರೆ ಆವರಿಸಿದ ಬಾಡೂಟದ ಘಮಲು

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:26 IST
Last Updated 16 ಜನವರಿ 2017, 6:26 IST
ಚಿಕ್ಕಲ್ಲೂರು ಜಾತ್ರೆ ಆವರಿಸಿದ ಬಾಡೂಟದ ಘಮಲು
ಚಿಕ್ಕಲ್ಲೂರು ಜಾತ್ರೆ ಆವರಿಸಿದ ಬಾಡೂಟದ ಘಮಲು   

ಹನೂರು: ಕಣ್ಣು ಹಾಯಿಸಿದಷ್ಟು ಹರಡಿ ಕೊಂಡಿದ್ದ ಜನಸಾಗರ, ಎಲ್ಲೆಂದರಲ್ಲಿ ತಲೆ ಎತ್ತಿದ್ದ ಬಿಡಾರಗಳು, ಇಡೀ ಜಾತ್ರೆಯನ್ನೇ ಆವರಿಸಿದ್ದ ಬಾಡೂಟದ ಘಮಲು. ಇದು ಜಿಲ್ಲೆಯ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯ ಪಂಕ್ತಿಸೇವೆಯಲ್ಲಿ ಕಂಡು ಬಂದ ಚಿತ್ರಣ.

ಜ.12ರಂದು ನಡೆದ ಚಂದ್ರಮಂಡ ಲೋತ್ಸವದ ಮೂಲಕ ಶುಭಾರಂಭ ಗೊಂಡ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದ ಅಂಗವಾಗಿ ಚಿಕ್ಕಲ್ಲೂರು ಜಾತ್ರೆಯ ಪಂಕ್ತಿಸೇವೆಗೆ ಟೆಂಪೊ, ಗೂಡ್ಸ್ ಆಟೊ, ಟ್ರ್ಯಾಕ್ಟರ್‌, ಲಾರಿ, ದ್ವಿಚಕ್ರ ವಾಹನ ಹಾಗೂ ಬಸ್‌ಗಳಲ್ಲಿ ಬಂದ ಲಕ್ಷಾಂತರ ಭಕ್ತರು ದೇವಾಲಯದ ಸುತ್ತಮುತ್ತಲಿನ ಜಮೀನುಗಳಲ್ಲಿ ಬೀಡು ಬಿಟ್ಟಿದ್ದರು.

ತಲೆ ತಲಾಂತರಗಳಿಂದಲೂ ನಡೆದು ಕೊಂಡು ಬಂದಿರುವ ಜಾತ್ರೆಯಲ್ಲಿ ಭಕ್ತರು ದೂಳನ್ನು ಲೆಕ್ಕಿಸದೆ, ನೀಲಗಾರ ವಿಧಾನಗಳೊಡನೆ ಸಿದ್ದಪ್ಪಾಜಿ ಜಾತ್ರೆಯಲ್ಲಿ ಪಾಲ್ಗೊಂಡರು.
ನೆತ್ತಿಯನ್ನು ಸುಡುತ್ತಿದ್ದ ಬಿಸಿಲನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. 

ನಂತರ ಬಿಡಾರ ಗಳಿಗೆ ತೆರಳಿ ಸಾಮೂಹಿಕ ಸಹಪಂಕ್ತಿ ಯಲ್ಲಿ ಬಾಡೂಟ ಸವಿದರು. ಬೆಳಿಗ್ಗೆ ಯಿಂದಲೇ ಜಾತ್ರೆಗೆ ಸಾಕಷ್ಟು ವಾಹನಗಳು ಬಂದಿದ್ದರಿಂದ ಸಂಚಾರ ದಟ್ಟಣೆಯಾಯಿತು.  ದೇವರ ಪೂಜೆಗೆ ಸಹಸ್ರಾರು ಭಕ್ತರು ಏಕಾಏಕಿ ಮುಂದಾದ ಹಿನ್ನೆಲೆಯಲ್ಲಿ ಬಾರಿ ನೂಕುನುಗ್ಗಲು ಉಂಟಾಗಿ, ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಹಳೇಮಠ ಹಾಗೂ ಹೊಸಮಠದಲ್ಲಿ ಜಮಾಯಿಸಿದ್ದ ಭಕ್ತರು ತಮ್ಮ ನೆಚ್ಚಿನ ದೇವರಿಗೆ ಧೂಪ ಹಾಕಿ ನಮಿಸಿದರು. ದೀಕ್ಷೆ ಪಡೆದ ನೂತನ ಪ್ರತಿ ಬಿಡದಿಗೂ ತೆರಳಿ ಭಿಕ್ಷಾಟನೆ ಪಂಕ್ತಿಸೇವೆಗೆ ಚಾಲನೆ ನೀಡಿದರು. ದೂರದ ಊರುಗಳಿಂದ ವಾರಕ್ಕೂ ಮುಂಚೆ ಬಂದು ವಾಸ್ತವ್ಯ ಹೂಡಿದ್ದ ಭಕ್ತರು ಪಂಕ್ತಿಸೇವೆ ಮುಗಿಯುತ್ತಿದ್ದಂತೆ ವಾಪಸ್‌ ತೆರಳಿದರು. ಸೋಮವಾರ  ಮುತ್ತತ್ತಿರಾಯನ ಸೇವೆ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.