ಗುಂಡ್ಲುಪೇಟೆ: ಜೀತ ಪದ್ಧತಿ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು ಎಂದು ಜೀತ ವಿಮುಕ್ತ ಕರ್ನಾಟಕ ಸಂಘಟನೆಯ ಶಿವರಾಜು ಅಭಿಪ್ರಾಯಪಟ್ಟರು. ಜಲ ಎಜುಕೇಷನ್ ಟ್ರಸ್ಟ್ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ‘ಜೀವಿಕದ ನೆಲೆ-ಸೆಲೆಗಳು–30 ವರ್ಷ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ವಿಶ್ವಸಂಸ್ಥೆ ವರದಿ ಪ್ರಕಾರ ಭಾರತದಲ್ಲಿ 4 ಕೋಟಿ ಜೀತದಾಳುಗಳಿದ್ದಾರೆ. ರಾಜ್ಯದಲ್ಲಿಯೂ 3 ಲಕ್ಷಕ್ಕೂ ಹೆಚ್ಚು ಮಂದಿ ಜೀತದಾಳುಗಳಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ. ಆದರೂ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾನವ ಬಂಧುತ್ವ ವೇದಿಕೆ ಜಿಲ್ಲಾ ಪ್ರಧಾನ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಮಾತನಾಡಿ, ಬಾಲಕಾರ್ಮಿಕ, ದೇವದಾಸಿ, ಜೀತ ಪದ್ಧತಿಯಂತಹ ಪಿಡುಗುಗಳು ಇನ್ನೂ ಅಸ್ತಿತ್ವದಲ್ಲಿ ಇರಲು ವಿದ್ಯಾವಂತರ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.
ದೇಶದ ಪ್ರಗತಿ ಎಂದರೆ ಜೀವನ ಮಟ್ಟ ಸುಧಾರಿಸುವುದಾಗಿದೆ. ಆದರೆ ಇಲ್ಲಿ ಬಡವ ಬಲ್ಲಿದರ ಸಂಖ್ಯೆ ಹೆಚ್ಚಾಗುತ್ತಿದೆ. ಅಂಬೇಡ್ಕರ್ ಅವರು ಬಂಡವಾಳಶಾಹಿ ವ್ಯವಸ್ಥೆಯನ್ನು ಅಂದೇ ವಿರೋಧಿಸಿದ್ದರು. ದೇಶದ ಆಸ್ತಿ ಕೆಲವೇ ಕೆಲವು ಜನರ ಕೈಯಲ್ಲಿರುವುದು ದುರಂತ ಎಂದರು ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಪುಟ್ಟಮ್ಮ ಕಾರ್ಯಕ್ರಮ ಉದ್ಘಾಟಿಸಿದರು.
ಜೀತದಾಳು ಮತ್ತು ಕೃಷಿ ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ಗೋಪಾಲ್, ಜೀವಿಕ ಸಂಘಟನೆ ತಾಲ್ಲೂಕು ಸಂಯೋಜಕ ಜಿ.ಕೆ. ಕುನ್ನಹೊಳಿಯಯ್ಯ, ಛಲವಾದಿ ಮಹಾಸಭಾದ ಆರ್. ಸೋಮಣ್ಣ, ಸಮಷ್ಟಿ ಸಂಸ್ಥೆಯ ಗಂಗಾಧರಸ್ವಾಮಿ, ಬಿಎಸ್ಪಿ ಟೌನ್ ಘಟಕದ ಅಧ್ಯಕ್ಷ ರಮೇಶ್ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.