ADVERTISEMENT

ನಿರಂತರ ಯೋಗದಿಂದ ಮನಸ್ಸಿಗೆ ನೆಮ್ಮದಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 11:02 IST
Last Updated 24 ಏಪ್ರಿಲ್ 2014, 11:02 IST

ಚಾಮರಾಜನಗರ: ‘ನಿರಂತರ ಯೋಗ ಮಾಡುವುದರಿಂದ  ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗುವ ಜತೆಗೆ, ದೇಹದಲ್ಲಿ ಉಲ್ಭಣಿಸುವ ಕಾಯಿಲೆಗಳಿಂದ ಮುಕ್ತಿ ಹೊಂದಬಹುದು’ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಶಿಕ್ಷಕ  ಬಿ.ಪಿ. ಪ್ರಕಾಶ್ ಹೇಳಿದರು.

ಸಮೀಪದ ಮರಿಯಾಲ ಜೆಎಸ್ಎಸ್ ರುಡ್ ಸೆಟ್‌ನಲ್ಲಿ ನಡೆಯುತ್ತಿರುವ ಗ್ರಾಮೀಣ ಎಳೆಯರ ಮೇಳ ಕಾರ್ಯಕ್ರಮದ ಎರಡನೇ ದಿನವಾದದ ಮಂಗಳವಾರದ ಶಿಬಿರದಲ್ಲಿ ಯೋಗ ಶಿಕ್ಷಣ ಕುರಿತು ಚಿಣ್ಣರಿಗೆ ಮಾಹಿತಿ ನೀಡಿದರು.

ಯೋಗಾಸಾನ ಮಾಡುವುದರಿಂದ ಹಲವು ಲಾಭಗಳಿವೆ. ಮನಸ್ಸು ನಮ್ಮ ಹತೋಟಿಗೆ ಬರುತ್ತದೆ. ನಾವು ಇಚ್ಛಿಸುವ ಉತ್ತಮ ಕಾರ್ಯಗಳು ಫಲಿಸುತ್ತದೆ.

ಹಿಂದೆ ಋಷಿ ಮುನಿಗಳು ಯೋಗ ಹಾಗೂ ತಪಸ್ಸಿನ ಶಕ್ತಿಯನ್ನು ಪಡೆದು ಹೆಚ್ಚು ಕಾಲ ಆರೋಗ್ಯವಂತರಾಗಿ ಬದುಕುತ್ತಿದ್ದರು. ದೇಹವನ್ನು ದಂಡಿಸುವ ಮೂಲಕ  ಆರೋಗ್ಯವನ್ನು ಪಡೆದುಕೊಳ್ಳುತ್ತಿದ್ದರು. ಯೋಗಭ್ಯಾಸ ನಮ್ಮ ದೇಶದ ಸಂಸ್ಕೃತಿಯಾಗಿದೆ. ಇತ್ತಿಚಿನ ದಿನಗಳಲ್ಲಿ ಪಾಶ್ಚಿಮಾತ್ಯರು ಯೋಗ ಹಾಗೂ ಪ್ರಕೃತಿ ಚಿಕಿತ್ಸೆಗೆ ಹೆಚ್ಚು ಒತ್ತು ನೀಡಿ ಅರೋಗ್ಯವಂತ ಜೀವನ ನಡೆಸಲು ಮುಂದಾಗಿದ್ದಾರೆ ಎಂದರು. ಮುಂಜಾನೆ ಯೋಗಾಭ್ಯಾಸ ಮಾಡುವುದರಿಂದ ದೈನಂದಿನ ಚಟುವಟಿಕೆಗಳಿಗೆ ಉಲ್ಲಾಸ ಸಿಗುತ್ತದೆ. ಯೋಗದ ವಿವಿಧ ಆಸನಗಳನ್ನು ಹಾಕುವ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗದಿಂದ ದೇಹದ ಸೌಂದರ್ಯ ಕಾಪಾಡಿಕೊಳ್ಳುವ ಜತೆಗೆ, ಬೊಜ್ಜನ್ನು ಕರಗಿಸಿ  ಆರೋಗ್ಯವಂತರಾಗಬಹುದು ಎಂದರು.

ಮೈಸೂರಿನ ನಿವೃತ್ತ ವಿಜ್ಞಾನ ಶಿಕ್ಷಕ ಆರ್.ವಿ. ಶಂಕರ್ ಅವರು ವಿಜ್ಞಾನದ ಸರಳ ಪ್ರಯೋಗಳು ಕುರಿತು ಮಾಹಿತಿ ನೀಡಿದರು. ವಿಜ್ಞಾನದ ಸರಳಪ್ರಯೋಗಗಳು ಮತ್ತು ಅನುಪಯುಕ್ತ ವಸ್ತುಗಳಿಂದ  ವಿಜ್ಞಾನ ಮಾದರಿ ತಯಾರಿಸುವ ಬಗ್ಗೆ ತಿಳಿಸಿಕೊಟ್ಟರು.

ತಾಲ್ಲೂಕು ವೈದ್ಯಾಧಿಕಾರಿ ಡಾ. ಮಲ್ಲಿಕಾ ಮಾತನಾಡಿ, ‘ಮಕ್ಕಳಲ್ಲಿರುವ ಅಪೌಷ್ಟಿಕತೆಯಿಂದ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಮೊದಲು ಆರೋಗ್ಯ ಕಾಪಾಡಿಕೊಳ್ಳಬೇಕು. ಆಗ ಮಾತ್ರ, ನಮಗೆ ಬೇಕಾದನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು, ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಂಡರೆ ಶೇ 50 ರಷ್ಟು ಆರೋಗ್ಯ ಸಿಗಲಿದೆ’ ಎಂದರು.

ಅಗ್ನಿ ಶಾಮಕ ದಳ ಅಧಿಕಾರಿ ಶಿವರುದ್ರಶೆಟ್ಟಿ ವಿಪತ್ತು ನಿರ್ವಹಣೆ ಕುರಿತು ಮಕ್ಕಳಿಗೆ ಪ್ರಾತ್ಯಕ್ಷಿಕತೆ ಮೂಲಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರುಡ್ ಸೆಟ್‌ ಸಂಸ್ಥೆಯ ನಿರ್ದೇಶಕ ಗಣೇಶ್ ಭಟ್, ಯೋಜನಾಧಿಕಾರಿ ಚಂದ್ರಶೇಖರ್, ಸಂಯೋಜಕ ಚಿನ್ನಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.