ADVERTISEMENT

ಪಶುಆರೋಗ್ಯ ಶಿಬಿರದಲ್ಲಿ ರೈತರಿಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 9:10 IST
Last Updated 23 ಡಿಸೆಂಬರ್ 2017, 9:10 IST

ಹನೂರು: ಮನುಷ್ಯರಿಗೆ ಬರುತ್ತಿದ್ದಂತಹ ಸಿಡುಬು, ಕಾಲುಬಾಯಿ ಮುಂತಾದ ರೋಗಗಳು ಈಗ ಪಶುಗಳಿಗೂ ವ್ಯಾಪಿಸಿದ್ದು, ಈ ಬಗ್ಗೆ ರೈತರು ಎಚ್ಚರವಹಿಸಬೇಕು ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ವೆಂಕಟರಮನ್ ತಿಳಿಸಿದರು. ಸಮೀಪದ ತೋಮಿಯಾರ್‌ಪಾಳ್ಯ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಶು ಆರೋಗ್ಯ ಶಿಬಿರ ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪಶುಗಳಿಗೆ ಚಪ್ಪೆ, ಗಳಲೆ, ನರಡಿ, ಮುಸುಡಿ ಹುಣ್ಣು, ಕರುಳುಬೆನೆ, ಮುಂತಾದ ರೋಗಗಳು ಕಾಣಿಸಿಕೊಳ್ಳತೊಡಗಿವೆ. ಈ ಬಗ್ಗೆ ರೈತರು ಸದಾ ಎಚ್ಚರಿಕೆ ವಹಿಸುವ ಮೂಲಕ ಅವುಗಳನ್ನು ತಡೆಗಟ್ಟಬೇಕು. ಪಶುಗಳಲ್ಲಿ ಸೋಂಕುಗಳು ಕಾಣಿಸಿಕೊಳ್ಳುತ್ತಿದ್ದಂತೆ ಪಶು ವೈದ್ಯಾಧಿಕಾರಿಗಳ ಸಲಹೆ ಪಡೆದು ಚಿಕಿತ್ಸೆ ಕೊಡಿಸಬೇಕು.

ಈ ಭಾಗದಲ್ಲಿ ಹೆಚ್ಚಾಗಿ ಮುಸುಕಿನ ಜೋಳ ಬೆಳೆಯುವುದರಿಂದ ಜೋಳದ ನುಚ್ಚನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ಜಾನುವಾರು ಕೊಟ್ಟಿಗೆಗಳು ಶುಚಿತ್ವದಿಂದ ಕೂಡಿರಬೇಕು. ಮಳೆಗಾಲದ ಸಂದರ್ಭದಲ್ಲಿ ಉಣ್ಣೆಗಳು ಕಾಣಿಸಿಕೊಳ್ಳುವುದರಿಂದ 21 ದಿನಗಳಿಗೊಮ್ಮೆ ಉಣ್ಣೆ ಔಷಧಿಗಳನ್ನು ಸಿಂಪಡಿಸಬೇಕು. ತೆನೆ ಹಂತದಲ್ಲಿ ಲಸಿಕೆ ಹಾಕಬಾರದೆಂಬ ತಪ್ಪು ತಿಳಿವಳಿಕೆಯನ್ನು ಬಿಡಬೇಕು ಎಂದು ಮಾಹಿತಿ ನೀಡಿದರು.

ADVERTISEMENT

ಪಶುಪಾಲನಾ ಇಲಾಖೆಯ ವಿಸ್ತಾರಕ ಡಾ.ಶಿವಣ್ಣ ಮಾತನಾಡಿ, ಕರುವಿಗೆ ಮೊದಲ ಹಾಗೂ ಎರಡು ತಿಂಗಳು 3 ಲೀಟರ್‌ಗೂ ಹೆಚ್ಚು ಹಾಲನ್ನು ನೀಡಬೇಕು. ಇದರಿಂದ ಕರುವಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಮೊದಲ ಮತ್ತು ಎರಡನೇ ತಿಂಗಳು ಕರುವಿಗೆ ಹಾಲನ್ನು ಬಿಡದೆ ಡೈರಿಗೆ ಹಾಕುವುದರಿಂದ ಕರುವಿನ ಬೆಳವಣಿಗೆ ಕುಂಠಿತವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುಮತಿ, ಸುಂದ್ರಪ್ಪ, ಗ್ರಾಮಪಂಚಾಯಿತಿ ಅಧ್ಯಕ್ಷ ಜಾನ್ಪಾಲ್, ಸಿಸ್ಟರ್ ಅಲೀಸ್, ಮುಖಂಡರಾದರ ವಿಕುಮಾರ್, ಸಿಸ್ಟರ್ ಅಲಿಸ್, ಡಾ.ಶಿವಕುಮಾರ್, ಡಾ.ಸಿದ್ದರಾಜು, ಡಾ.ಶರತ್‌ಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.