ADVERTISEMENT

ಯಳಂದೂರು: ಸದ್ಭಾವನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2014, 8:13 IST
Last Updated 21 ಆಗಸ್ಟ್ 2014, 8:13 IST

ಯಳಂದೂರು: ಇಡೀ ದೇಹವನ್ನು ನಿಗ್ರಹಿಸುವ ಶಕ್ತಿ ಮನಸಿಗಿದೆ. ಇದನ್ನು ನಿಯಂತ್ರಿಸಿದಲ್ಲಿ ಯಾವುದೇ ಅನಾಹುತಗಳು ಸಂಭವಿಸುವುದಿಲ್ಲ. ಈ ನಿಟ್ಟಿನಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಮನಸು ಅನ್ನು ನಿಯಂತ್ರಿಸಲು ಶ್ರಮಿಸಬೇಕು ಎಂದು ಕೊಳ್ಳೇಗಾಲ ಮಹದೇಶ್ವರ ಕಾಲೇಜಿನ ಸಹ ಪ್ರಾಧ್ಯಪಕಿ ಎಂ.ಆರ್‌.  ಸರಳಾದೇವಿ ಕರೆ ನೀಡಿದರು.

ಅವರು ಪಟ್ಟಣದ ವೈಎಂಎಂ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ಮೊಗದಲ್ಲಿ ಸದಾ ಪ್ರಸನ್ನತೆ ಇರಬೇಕು.

ಮನಸು ಹಾಗೂ ದೇಹದ ಮೇಲೆ ನಿಗ್ರಹವಿರಬೇಕು. ಯಾವುದೇ ಕಾರಣಕ್ಕೂ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು. ದೈಹಿಕ ಶಕ್ತಿ ಇರುವುದು ಕ್ರೌರ್ಯಕ್ಕೆ ಅಲ್ಲ, ಇದನ್ನು ತನ್ನ, ಸಮಾಜದ, ದೇಶದ ಒಳಿತಿಗೆ ವಿನಿಯೋಗಿಸಬೇಕು. ಮೌಲ್ಯಗಳನ್ನು ಉಳಿಸುವ ಕೆಲಸವನ್ನು ಯುವ ಜನತೆ ಹೆಚ್ಚಾಗಿ ಮಾಡಬೇಕು. ಆತ್ಮಶಕ್ತಿ ಬಲವಾಗಿ ಇದ್ದಲ್ಲಿ ಸಾಧನೆ ಸುಲಭವಾಗುತ್ತದೆ. ಇದರೊಂದಿಗೆ ಆರೋಗ್ಯಕರವಾದ ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದೆ ಆದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಕನ್ನಡ ವಿಭಾಗದ ಸಹ ಪ್ರಾಧ್ಯಪಕ ಥಿಯೋಡರ್‌ ಲೂಥರ್‌ ಮಾತನಾಡಿ, ಈಚೆಗೆ ಮನುಷ್ಯ ಸಂಬಂಧಗಳು ಹಳಸುತ್ತಿವೆ. ಪಟ್ಟಣ ಪ್ರದೇಶಗಳಲ್ಲಿ ಈ ಪ್ರಮಾಣ ಹೆಚ್ಚಾಗಿದೆ. ಇದನ್ನು ಬೆಸೆಯುವ ಕೆಲಸವನ್ನು ಯುವ ಸಮುದಾಯ ಮಾಡಿದ್ದೇ ಆದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬಹುದು. ಯಾವುದೇ ಪ್ರಲೋಭನೆಗೆ ಒಳಗಾಗದೆ, ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ಪ್ರಾಮಾಣಿಕತೆ ಮೆರೆದಿದ್ದೇ ಆದಲ್ಲಿ ಉನ್ನತ ಸ್ಥಾನ ತಾನಾಗಿಯೇ ಒಲಿಯುತ್ತದೆ ಎಂದರು.

ಪ್ರಾಂಶುಪಾಲ ಕೆಂಪರಾಜು ಮಾತನಾಡಿದರು. ಸಹ ಪ್ರಾಧ್ಯಪಕರಾದ ಡಾ.ರವಿಶಂಕರ್‌ ವಿದ್ಯಾರ್ಥಿ ಮುಖಂಡರಾದ ಹರೀಶ, ನವೀನ, ಮಹೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.