ADVERTISEMENT

ರಾಹುಲ್‌ ಸ್ವಾಗತಕ್ಕೆ ಸಕಲ ಸಿದ್ಧತೆ

ಮಾರ್ಚ್‌ 24ರಂದು ಕೊಳ್ಳೇಗಾಲ, ಯಳಂದೂರಿನಲ್ಲಿ ರೋಡ್‌ ಶೋ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 8:12 IST
Last Updated 21 ಮಾರ್ಚ್ 2018, 8:12 IST

ಕೊಳ್ಳೇಗಾಲ: ನಗರಕ್ಕೆ ಮಾರ್ಚ್‌ 24ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬರುತ್ತಿದ್ದಾರೆ, ಅವರಿಗೆ ಅದ್ಧೂರಿಯಾಗಿ ಸ್ವಾಗತಿಸಲು ಕಾರ್ಯಕರ್ತರು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಂಸದ ಆರ್.ಧ್ರುವನಾರಾಯಣ ಸಲಹೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ರಾಹುಲ್‌ ಗಾಂಧಿ ರೋಡ್ ಶೋ ಸಂಬಂಧ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಹುಲ್‌ ರೋಡ್ ಶೋ ನಡೆಸಲಿದ್ದಾರೆ.

ADVERTISEMENT

ಚಾಮರಾಜನಗರದಲ್ಲಿ ಸಭೆ ಮುಗಿಸಿಕೊಂಡು ಮಧ್ಯಾಹ್ನ 3 ಗಂಟೆಗೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಬರುವ ರಾಹುಲ್‌ ಗಾಂಧಿ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಅದ್ಧೂರಿಯಾಗಿ ಸ್ವಾಗತಿಸಬೇಕು ಹಾಗೂ ಪ್ರವಾಸವನ್ನು ಯಶಸ್ವಿಗೊಳಿಸಬೇಕು. ಬರುವ ಜನರಿಗೆ ನೀರು, ನೆರಳಿನ ವ್ಯವಸ್ಥೆ ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದರು.

ಸಭೆಯಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ವೀಕ್ಷಕ ಬಸವರಾಜು, ಶಾಸಕ ಎಸ್.ಜಯಣ್ಣ, ಮಾಜಿ ಶಾಸಕ ಬಾಲರಾಜ್, ಜಿಲ್ಲಾ ಪಂಚಾಯಿತಿ ಹೆಚ್ಚುವರಿ ಅಧ್ಯಕ್ಷ ಯೋಗೇಶ್, ನಗರಸಭೆ ಅಧ್ಯಕ್ಷ ಶಾಂತರಾಜು, ಉಪಾಧ್ಯಕ್ಷ ಶಿವನಾಂದ್, ನಗರಸಭೆ ಸದಸ್ಯರಾದ ರಮೇಶ್, ಅಕ್ಮಲ್, ಹರ್ಷ,
ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚೇತನ್‌ ದೊರೆರಾಜ್, ಮುಖಂಡರಾದ ಕಿನಕಳ್ಳಿ ರಾಚಯ್ಯ, ಡಿ.ಸಿದ್ದರಾಜು ಸೇರಿದಂತೆ ಇತರರು
ಹಾಜರಿದ್ದರು.

ಯಳಂದೂರು: ಜಿಲ್ಲೆಗೆ ರಾಹುಲ್‌ ಗಾಂಧಿ ಭೇಟಿ ನೀಡುತ್ತಿರುವುದು ಯುವ ಜನತೆಗೆ ಹಾಗೂ ಪಕ್ಷಕ್ಕೆ ಮತ್ತಷ್ಟು ಬಲ ತಂದುಕೊಡಲಿದೆ ಎಂದು ಸಂಸದ ಆರ್. ಧ್ರುವನಾರಾಯಣ ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಹುಲ್‌ ಗಾಂಧಿ ಬರುವ ಹಿನ್ನೆಲೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಯುವ ಪೀಳಿಗೆಯನ್ನು ಪಕ್ಷದಲ್ಲಿ ತೊಡಗಿಸಬೇಕು ಎಂಬ ಹಂಬಲ ರಾಹುಲ್‌ ಅವರದ್ದು. ಹಿರಿಯರು ಮತ್ತು ಕಾರ್ಯಕರ್ತರ ನಡುವೆ
ಹೊಂದಾಣಿಕೆ ತರುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್‌ ಬಲ ಮತ್ತಷ್ಟು ವೃದ್ಧಿಸಲಿದೆ ಎಂದರು.

ಬಿಳಿಗಿರಿರಂಗನಬೆಟ್ಟಕ್ಕೆ ರಾಹುಲ್ ಗಾಂಧಿ ಒಮ್ಮೆ ಭೇಟಿ ನೀಡಿದ್ದರು. ಚಾಮರಾಜನಗರ ಮೂಲಕ ಬಂದು ಮಧ್ಯಾಹ್ನ 2 ಗಂಟೆಗೆ ಯಳಂದೂರಿನಲ್ಲಿ ರೋಡ್ ಶೊ ನಡೆಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಿ.ಕೆ. ಶಿವಕುಮಾರ್, ದಿನೇಶ್‌ ಗುಂಡೂರಾವ್‌ ಭಾಗವಹಿಸುವರು ಎಂದರು.

ಶಾಸಕ ಎಸ್. ಜಯಣ್ಣ , ಜಿ.ಪಂ ಅಧ್ಯಕ್ಷ ಜೆ. ಯೋಗೇಶ್, ಮಾಜಿ ಶಾಸಕ ಎಸ್. ಬಾಲರಾಜು, ಕೆಪಿಸಿಸಿ ಕಾರ್ಯದರ್ಶಿ ಬಸವರಾಜು. ಜಿ.ಪಂ ಸದಸ್ಯೆ ಉಮಾವತಿ ಸಿದ್ದರಾಜು ಹಾಜರಿದ್ದರು.

ಸಂತೇಮರಹಳ್ಳಿ: ಪ್ರವಾಸಿ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಪೂರ್ವಭಾವಿ ನಡೆಸಲಾಯಿತು.

ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ಮಾರ್ಚ್‌ 24ರಂದು ರಾಹುಲ್ ಗಾಂಧಿ ಜಿಲ್ಲೆಗೆ ಬರುತ್ತಿದ್ದಾರೆ. ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪಕ್ಷದ ಸಮಾವೇಶ ನಡೆಯಲಿದೆ. 10 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಸೇರಬೇಕು ಎಂದರು.

ಸಂತೇಮರಹಳ್ಳಿ ಮಾರ್ಗವಾಗಿ ಯಳಂದೂರು ಹಾಗೂ ಕೊಳ್ಳೇಗಾಲದಲ್ಲಿ ರೋಡ್‌ ಶೋ ನಡೆಸಲಾಗುವುದು. ಆಯಾ ಸ್ಥಳಗಳಲ್ಲಿನ ಕಾರ್ಯಕರ್ತರು ಅಲ್ಲಲ್ಲಿ ಇದ್ದು, ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರಬೇಕು. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರು ಬರುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ಎಸ್. ಜಯಣ್ಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಯೋಗೀಶ್, ಮಾಜಿ ಶಾಸಕ ಎಸ್.ಬಾಲರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಕಿನಕಹಳ್ಳಿ ರಾಚಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.