ಯಳಂದೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರಿಗಾಗಿ ವಸತಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಮನೆಗಳನ್ನು ಕಟ್ಟಿಕೊಂಡು, ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ದುಗ್ಗಹಟ್ಟಿ ಗ್ರಾ.ಪಂ ಪಿಡಿಒ ಶಶಿಕಲಾ ಅಭಿಪ್ರಾಯ ಪಟ್ಟರು.
ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಬಸವ ಆವಾಜ್ ಯೋಜನೆಯಡಿ ದುಗ್ಗಹಟ್ಟಿ ಪಂಚಾಯಿತಿಯಲ್ಲಿ ಹಿಂದುಳಿದ ವರ್ಗ ಹಾಗೂ ಇತರೆ ಜನಾಂಗಕ್ಕೆ 29 ಮನೆಗಳು ಮಂಜೂರಾಗಿವೆ. ಇದರ ಬಗ್ಗೆ ಈಗಾಗಲೇ ಸಭೆ ನಡೆಸಲಾಗಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು.
ನರೇಗಾ ಯೋಜನೆಯಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಹೊಸದಾಗಿ ಕ್ರಿಯಾಯೋಜನೆ ರೂಪಿಸಲು ಕಾಮಗಾರಿ ಪಟ್ಟಿ ಮಾಡಲಾಗುವುದು. ನಮ್ಮ ಗ್ರಾಮ ನಮ್ಮ ಹೊಲ ಯೋಜನೆಗಳಿದ್ದು, ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು. ಗ್ರಾ.ಪಂ ಅಧ್ಯಕ್ಷೆ ಪುಟ್ಟಮ್ಮಣಿ ಕಪ್ಪಣ್ಣ, ಉಪಾಧ್ಯಕ್ಷ ಮಾದೇಶ್, ಸದಸ್ಯೆ ಅಂಜಲಿ ನೋಡಲ್ ಅಧಿಕಾರಿ ಎಂ.ಎಲ್. ದೊಡ್ಡೇಗೌಡ, ಮುಖಂಡರಾದ ಕಂದಹಳ್ಳಿ ಬಸವಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.