ಕೊಳ್ಳೇಗಾಲ: ನಗರದ ಚಿತ್ರಚಾವಡಿ ಮಾರಮ್ಮ ದೇವಾಲಯದಲ್ಲಿ ಕಂಡಾಯೋತ್ಸವ ಹಾಗೂ ಮಾರಿಹಬ್ಬದ ಅಂಗವಾಗಿ ಮಂಗಳವಾರ ಸಂಜೆ ನಾಯಕರ ಬೀದಿಗಳಲ್ಲಿ ಮಡೆ ಹಾಗೂ ತಂಪು ಉತ್ಸವ ವಿಜೃಂಭಣೆಯಿಂದ ಜರುಗಿತು.ನಾಯಕ ಸಮುದಾಯದ ಮಹಿಳೆಯರು ಶುಚೀರ್ಭೂತರಾಗಿ ಮನೆಯ ಮುಂಭಾಗವನ್ನು ತಳಿರುತೋರಣಗಳಿಂದ ಸಿಂಗರಿಸಿ ತಮ್ಮ ಮನೆಗಳ ಹೊರಗಡೆಯೇ ಮಡೆಪ್ರಸಾದ ತಯಾರಿಸಿ ಭಕ್ತಿಭಾವ ಮೆರೆದು ಸಂಭ್ರಮಿಸಿದರು.
ಇಡೀ ಬೀದಿ ಮಡೆ ಉತ್ಸವದ ಹಿನ್ನೆಲೆಯಲ್ಲಿ ಜನಜಂಗುಳಿಯಿಂದ ಕೂಡಿತ್ತು. ದೇವಾಲಯದಲ್ಲಿ ವಿಶೇಷ ಕಳಸಪೂಜೆ ಸಲ್ಲಿಸಿದ ನಂತರ ಪೂಜಾರಿಗಳಾದ ಶೇಖರ್ ಮತ್ತು ದಶರಥ ಅವರು ಮನೆಗಳ ಬಾಗಿಲಲ್ಲಿ ಮಡೆ ತಯಾರಿಸಿದ ಸ್ಥಳಕ್ಕೆ ಬಂದು ಮಡೆ ಪ್ರಸಾದವನ್ನು ಆಗಸಕ್ಕೆಸೆಯುವ ಮೂಲಕ ಭಕ್ತರ ಗಮನ ಸೆಳೆದರು.
ಬೀದಿಯಲ್ಲಿ ಮಹಿಳೆಯರು, ಮಕ್ಕಳು ಪುರುಷರು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕಿಕ್ಕಿರಿದು ನೆರೆದು ಜೋರಾದ ಘೋಷಣೆಗಳನ್ನು ಕೂಗುವ ಮೂಲಕ ಪೂಜಾರಿಗಳು ಆವೇಶಭರಿತರಾಗಿ ಮಾಡುವ ದೃಶ್ಯ ಸೇರಿದ್ದ ಜನರಲ್ಲಿ ಮೈನವಿರೇಳಿಸಿತು.
ಪಾಳ್ಯ, ಮುಡಿಗುಂಡ, ಸತ್ತೇಗಾಲ, ಕುಣಗಳ್ಳಿ, ಚಾಮರಾಜನಗರ, ಯಳಂದೂರು ಸೇರಿದಂತೆ ಇತರೆಡೆಗಳಿಂದ ನೆಂಟರಿಷ್ಟರು ಮಡೆ ಉತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೊಪ್ಪಾಳಿ ಮಹದೇವ ನಾಯಕ ನಗರಸಭಾ ಸದಸ್ಯ ಸುರೇಶ್, ಮುಖಂಡರಾದ ಸುಂದರ್, ಬಸವಣ್ಣ, ಗೋವಿಂದರಾಜು, ನಾಯಕ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.