ADVERTISEMENT

ಸೋಲಾರ್‌ ಕಂಪೆನಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 5:39 IST
Last Updated 6 ನವೆಂಬರ್ 2017, 5:39 IST

ಗುಂಡ್ಲುಪೇಟೆ: ತಾಲ್ಲೂಕಿನ ಕಬ್ಬಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಸೌರವಿದ್ಯುತ್ ಘಟಕ ಸ್ಥಾಪನೆಗೆ ಅರಣ್ಯ ಇಲಾಖೆ ಅನುಮತಿಯಿಲ್ಲದೆ ಮರಗಳನ್ನು ಕಡಿದ ಆರೋಪದಲ್ಲಿ ಏಟ್ರಿಯಾ ಸೋಲಾರ್‌ ಪವರ್‌ ಪ್ಲಾಂಟ್‌ ಕಂಪೆನಿಯ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.

ಹಕ್ಕಲಪುರ, ಕಲ್ಲಹಳ್ಳಿ ಹಾಗೂ ಕಬ್ಬಹಳ್ಳಿ ಗ್ರಾಮಗಳ ಬಳಿಯ ಸರ್ವೇ ನಂ.56 ಹಾಗೂ ಇತರೆ ಜಮೀನುಗಳಿಂದ 120 ಎಕರೆ ವಿಸ್ತೀರ್ಣದ ಖಾಸಗಿ ಹಿಡುವಳಿ ಭೂಮಿಯಲ್ಲಿ ಕಂಪೆನಿಯು 30 ಮೆಗಾ ವ್ಯಾಟ್‌ನ ಸೌರ ವಿದ್ಯುತ್‌ ಘಟಕ ಸ್ಥಾಪಿಸುತ್ತಿದೆ. ಈ ಕಾಮಗಾರಿಗಾಗಿ ಅರಣ್ಯ ಇಲಾಖೆ ಅನುಮತಿಯಲ್ಲದೆ ವಿವಿಧ ಜಾತಿಯ 66 ಮರಗಳನ್ನು ಕಡಿದು ಸಾಗಾಣಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಅನುಮತಿ ಇಲ್ಲದೆ ಅಕ್ರಮವಾಗಿ ಮರ ಕಡಿದಿರುವುದು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976ರ ಪ್ರಕಾರ ಅಪರಾಧವಾಗಿದೆ. ಹೀಗಾಗಿ, ಕಂಪೆನಿಯ ಕ್ಷೇತ್ರ ವ್ಯವಸ್ಥಾಪಕ ನವೀನ್‌ ಕುಮಾರ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಈ ಸಂಬಂಧ ಅದು ಅ.11ರಂದೇ ತಾಲ್ಲೂಕಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದೆ.

ADVERTISEMENT

ನೋಟಿಸ್‌ ಜಾರಿ: ಪ್ರಕರಣವನ್ನು ಇಲಾಖೆಯ ಮೂಲಕವೇ ಇತ್ಯರ್ಥಪಡಿಸಿಕೊಳ್ಳುವ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನವೀನ್ ಕುಮಾರ್ ಅವರಿಗೆ ಗುಂಡ್ಲುಪೇಟೆ ಬಫರ್‌ ಜೋನ್‌ನ ವಲಯ ಅರಣ್ಯಾಧಿಕಾರಿಗಳು ಅ.30ರವರೆಗೆ ಕಾಲಾವಕಾಶ ನೀಡಿದ್ದರು. ಆದರೆ, ಅವರು ವಿಚಾರಣೆಗೆ ಹಾಜರಾಗದ ಕಾರಣ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇಲಾಖೆ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.