ಚೇಳೂರು: ಚೇಳೂರಿನ ಪಾಪಾಗ್ನಿ ನದಿ ದಡದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಕೋದಂಡ ರಾಮಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರದಿಂದ ಆರಂಭವಾಗಿದೆ.
ಫೆಬ್ರವರಿ 6ರ ತನಕ ನಡೆಯುವ ಬ್ರಹ್ಮರಥೋತ್ಸವಕ್ಕೆ ಸಿದ್ದತೆಗಳು ಜೋರಾಗಿ ನಡೆದಿವೆ. ಸೋಮವಾರ ರಾತ್ರಿ 10 ರಿಂದ ಪೂಜಾ ಕಾರ್ಯಗಳು ಆರಂಭವಾಗಿವೆ. 11 ನೇ ಶತಮಾನದ ಚೋಳರ ಕಾಲದ ದೇವಾಲಯ ಇದಾಗಿದೆ. ಅಂದಿನಿಂದ ಇಂದಿನ ತನಕ ರಾಜ ರಾಜ ಚೋಳನ ಆದೇಶದಂತೆ ಕೋದಂಡ ರಾಮಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ಪ್ರತಿ ವರ್ಷ ಮಾಘಮಾಸ ಷಷ್ಠಿಯ ಮಾರನೇ ದಿನವೇ(ಫೆ.3ರಂದು) ಕೋದಂಡ ರಾಮಸ್ವಾಮಿ ಬ್ರಹ್ಮ ರಥೋತ್ಸವ ನಡೆಯುತ್ತದೆ. ಈ ಬ್ರಹ್ಮ ರಥೋತ್ಸವ ಕಾರ್ಯಕ್ರಮಕ್ಕೆ ಸುಮಾರು ವರ್ಷಗಳಿಂದ ಅರ್ಚಕರಾಗಿ ಕಾರ್ಯ ನಿರ್ವಹಿಸಿರುವ ಶೇಷಪ್ಪ, ಲಕ್ಷ್ಮಿನರಸಪ್ಪ, ಪಿ.ಎಲ್.ಸುಬ್ರಹ್ಮಣ್ಯಂ ಅವರು ವಿಶೇಷ ಪೂಜಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.
ರಥೋತ್ಸವಕ್ಕೆ ಆಂಧ್ರ ಪ್ರದೇಶ ಸೇರಿದಂತೆ ಅವಿಭಜಿತ ಜಿಲ್ಲೆಯ ಗ್ರಾಮಗಳಿಂದ ಸಾವಿರಾರು ಭಕ್ತರು ಬಂದು ದೇವರಿಗೆ ಹರಿಕೆ ತೀರಿಸುತ್ತಾರೆ.
ನೂತನ ರಥೋತ್ಸವ : ದೇವಾಲಯದಲ್ಲಿ ಈವರೆಗೂ ಕಲ್ಲಿನ ಚಕ್ರಗಳಿಂದ ಕೂಡಿದ ರಥ ಎಳೆಯಲಾಗುತ್ತಿತ್ತು. ಈಗ ನೂತನ ರಥ ಸಿದ್ಧವಾಗಿವೆ. ಫೆ.3 ರಂದು ರಥೋತ್ಸವ ದಿನದಂದು ಕೋದಂಡ ರಾಮಸ್ವಾಮಿ, ಸೀತೆ, ಲಕ್ಷ್ಮಣ, ಹನುಮಂತ ದೇವರ ಮೂರ್ತಿಗಳನ್ನು ವಿಶೇಷ ಪೂಜೆ ಮತ್ತು ಮಂತ್ರ ಘೋಷಗಳೊಂದಿಗೆ ರಥದಲ್ಲಿ ಕೂರಿಸಲಾಗುವುದು. ರಥವನ್ನು ಕೆಳಗಿನ ಊರಿನಲ್ಲಿ ಒಂದು ಸುತ್ತು ಹಾಕಿಸಲಾಗುವುದು. ಈ ಧಾರ್ಮಿಕ ಆಚರಣೆ ಬಗ್ಗೆ ಚೋಳರ ಕಾಲದ ಶಾಸನದಲ್ಲೂ ಉಲ್ಲೇಖಿಸಲಾಗಿದೆ.
ಮನರಂಜನೆ: ರಥೋತ್ಸವದಲ್ಲಿ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವರು. ಚಕ್ಕಲ ಭಜನೆ, ಪಂಡರ ಭಜನೆ ನಡೆಯಲಿದೆ.
**
ಮುಜರಾಯಿ ಇಲಾಖೆ ನಿರ್ಲಕ್ಷ್ಯ
ಇತಿಹಾಸ ಪ್ರಸಿದ್ಧ ಚೇಳೂರಿನ ಕೋದಂಡ ರಾಮಸ್ವಾಮಿ ದೇವಾಲಯದ ನಿರ್ವಹಣೆಯನ್ನು ಮುಜರಾಯಿ ಇಲಾಖೆ ಹಲವು ವರ್ಷಗಳಿಂದ ನಿರ್ಲಕ್ಷ್ಯಿಸಿದೆ.
ದೇವಾಲಯಕ್ಕೆ ಆಡಳಿತ ಮಂಡಳಿ ನೇಮಕ ಮಾಡದೆ ಇರುವುದೇ ನಿರ್ಲಕ್ಷ್ಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.