ಬಾಗೇಪಲ್ಲಿ: ಪಟ್ಟಣದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಆಸ್ಪತ್ರೆಗೆ ಒಟ್ಟು 90 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 50 ಹುದ್ದೆಗಳು ಖಾಲಿಯಾಗಿವೆ.
100 ಹಾಸಿಗೆಗಳುಳ್ಳ ಈ ಆಸ್ಪತ್ರೆಯಲ್ಲಿ ಹೊರರೋಗಿಗಳು ಚಿಕಿತ್ಸೆಗೆ ಸಂಜೆಯವರೆಗೂ ಕಾಯ್ದರೂ ಅಗತ್ಯ ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯಕೀಯ ಚಿಕಿತ್ಸೆ ಇಲ್ಲದೆ ಗ್ರಾಮಿಣ ಭಾಗದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ರೈತ ನಾರಾಯಣಸ್ವಾಮಿ ತಿಳಿಸಿದರು.
ದಿನದಿನಕ್ಕೆ ಹೊರರೋಗಿಗಳ ಸಂಖ್ಯೆ ಹೆಚ್ಚುತ್ತಿವೆ. ಸಿಬ್ಬಂದಿಯ ಕೊರತೆಯಿಂದ ರೋಗಿಗಳನ್ನು ನಿಭಾಯಿಸುವುದು ಕಷ್ಟವಾಗಿದೆ. ಆಸ್ಪತ್ರೆಯಲ್ಲಿ 18 ದಾದಿಯರ ಅಗತ್ಯವಿದೆ. ಆದರೆ ಈ ಪೈಕಿ 10 ಹುದ್ದೆಗಳು ಖಾಲಿ ಇವೆ. ವೈದ್ಯರ ಹುದ್ದೆಗಳೂ ಖಾಲಿ ಇದ್ದು, ಅಗತ್ಯಕ್ಕೆ ತಕ್ಕಂತೆ ಸೌಲಭ್ಯ ಒದಗಿಸಬೇಕು. ಅಲ್ಲದೆ ವೈದ್ಯರಿಗೆ ಸ್ಥಳೀಯವಾಗಿ ವಸತಿ ಗೃಹಗಳಿಲ್ಲ. ಹೀಗಾಗಿ ತುರ್ತು ಸಂದರ್ಭದಲ್ಲಿ ವೈದ್ಯರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಆಸ್ಪತ್ರೆಯಲ್ಲಿ ಡಿಜಿಟಲ್ ಎಕ್ಸ್ರೇ, ಬಯೋ ಕೆಮಿಸ್ಟ್ರಿ ಅನಲೈಸರ್ ವಿಭಾಗಗಳಿಲ್ಲ. ಇದರಿಂದ ರೋಗಿಗಳ ರೋಗ ಪತ್ತೆಗೆ ಸಮಸ್ಯೆಯಾಗಿದೆ. ಹಾಸಿಗೆಗಳ ಕೊರತೆಯಿಂದ ಬಾಣಂತಿಯರು ನೆಲದ ಮೇಲೆ ಮಲಗುವಂತಾಗಿದೆ ಎಂದು ಆಸ್ಪತ್ರೆಯ ಒಳರೋಗಿ ವಿಮಲಮ್ಮ ದೂರಿದರು.
ಆಸ್ಪತ್ರೆಗೆ ಕ್ಯಾಂಟೀನ್, ವಾಹನ ನಿಲುಗಡೆ, ತುರ್ತು ವಾಹನ ಸೌಲಭ್ಯದ ಅಗತ್ಯವಿದೆ. ಹಾಗೆಯೇ ಈ ಭಾಗದಲ್ಲಿ ಅಪಘಾತಗಳಾದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವಾಗ ಜೀವ ಕಳೆದುಕೊಂಡ ಹಲವು ಉದಾಹರಣೆಗಳಿವೆ. ಅಪಘಾತ ಚಿಕಿತ್ಸಾ ಕೇಂದ್ರ ಆರಂಭಿಸುವ ಒತ್ತಾಯಕ್ಕೂ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ ಎಂಬುದು ಸ್ಥಳೀಯರ ದೂರು.
ತಾಯಿ ಮತ್ತು ಮಕ್ಕಳ, ಆಯುರ್ವೇದ, ನಗರ ಆರೋಗ್ಯ ಕೇಂದ್ರ ಸ್ಥಾಪಿಸಿದರೆ ಈ ಭಾಗದಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ತಾಲ್ಲೂಕು ಆಡಳಿತ ಆರೋಗ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.