ಶಿಡ್ಲಘಟ್ಟ: ‘ಥಾಯ್ಲೆಂಡ್ ದೇಶದಲ್ಲಿ ರೇಷ್ಮೆಯಿಂದ 30 ಬಗೆಯ ಉತ್ಪನ್ನಗಳನ್ನು ತಯಾರಿಸುವರು. ಈ ಮಾದರಿ ನಮ್ಮಲ್ಲಿಯೂ ಜಾರಿಯಾದರೆ ರೇಷ್ಮೆ ನಂಬಿದ ರೈತರ ಆರ್ಥಿಕ ಮಟ್ಟ ಸುಧಾರಣೆ ಸಾಧ್ಯ. ನಾನು ಅಧಿಕಾರಕ್ಕೆ ಬಂದರೆ ಈ ಮಾದರಿ ಜಾರಿಗೊಳಿಸುವೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿಕಾಸಪರ್ವ ಸಮಾವೇಶದಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ಎಲ್ಲೆಂದರಲ್ಲಿ ಮದ್ಯ ಸಿಗುತ್ತಿದೆ. ಹೀಗೆ ಬಂದ ಹಣವನ್ನು ದೋಚಿ ಅನ್ನಭಾಗ್ಯದ ಅಕ್ಕಿ ಕೊಡುತ್ತಿದ್ದಾರೆ. ಈ ಬಗ್ಗೆ ಜನರು ಸೂಕ್ಷ್ಮವಾಗಿ ತಿಳಿಯಬೇಕು ಎಂದು ಹೇಳಿದರು.
‘ಅಭಿವೃದ್ಧಿ ಮತ್ತು ಲಂಚಮುಕ್ತ ರಾಜ್ಯವನ್ನು ನಿರ್ಮಿಸುವುದೇ ನನ್ನ ಗುರಿ. ರಾಜ್ಯದಾದ್ಯಂತ ನಿರಂತರವಾಗಿ ಓಡಾಡುತ್ತಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದೇನೆ. ಕಾಂಗ್ರೆಸ್ ಅಥವಾ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಾವು ಈ ಎರಡೂ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಮ್ಮ ಗುರಿ ಏನಿದ್ದರೂ 113 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು’ ಎಂದು ನುಡಿದರು.ಸಿದ್ದರಾಮಯ್ಯ ಅವರು ಸಹಕಾರಿ ಬ್ಯಾಂಕಿಗಳಲ್ಲಿನ ರೈತರ ₹ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿದ್ದಾರೆ. ಆದರೆ ಇದುವರೆವಿಗೊ ಹಣ ಬಿಡುಗಡೆ ಮಾಡಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮಾಡಲಾಗುವುದು. ಸ್ತ್ರೀ ಶಕ್ತಿ ಗುಂಪುಗಳ ಸಾಲ ಸಹ ಮನ್ನಾ ಮಾಡುತ್ತೇವೆ’ ಎಂದು ಆಶ್ವಾಸನೆ ನೀಡಿದರು.
ಇತ್ತಿಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಿಂದ ದ್ರಾಕ್ಷಿ ಬೆಳೆಗೆ ಹಾನಿ ಆಗಿದೆ. ಯಾವುದೇ ಪಕ್ಷ ಇದರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಒಮ್ಮೆ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗದಂತೆ ನೋಡಿಕೊಳ್ಳುತ್ತೇವೆ ಎಂದರು.ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಹರಿಸುತ್ತೇವೆ. ಗರ್ಭಿಣಿಯರಿಗೆ 6 ತಿಂಗಳು ₹6 ಸಾವಿರ ಹಣ ನೀಡಲಾಗುವುದು. ಹಿರಿಯ ನಾಗರಿಕರಿಗೆ ನೆಮ್ಮದಿಯ ಜೀವನ ಮಾಡಲು ಜೀವನ ಪರ್ಯಂತ ₹ 5 ಸಾವಿರ ಪಿಂಚಣಿ, ಅವಿದ್ಯಾವಂತ ಹೆಣ್ಣು ಮಕ್ಕಳು, ಹಾಗೂ ನಿರುದ್ಯೋಗಿಗಳಿಗೆ ಸಸಿ ನೆಟ್ಟು ಬೆಳೆಸುವ ಕೆಲಸ ನೀಡಲಾಗುವುದು. ಅಲ್ಲದೆ ಅವರಿಗೆ ₹ ಸಾವಿರ ಸಂಬಳ ನೀಡಲಾಗುವುದು ಅವರು ಹೇಳಿದರು.
ಹೆಲಿಕಾಪ್ಟರ್ನಲ್ಲಿ ಕೇಶವಾಪುರ ಗ್ರಾಮಕ್ಕೆ ಬಂದ ಕುಮಾರಸ್ವಾಮಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಪಕ್ಷದ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು. ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು.
ಶಾಸಕ ಎಂ.ರಾಜಣ್ಣ, ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು, ಮುಖಂಡ ಕೆ.ಪಿ.ಬಚ್ಚೇಗೌಡ, ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ಡಾ.ಧನಂಜಯರೆಡ್ಡಿ, ನಗರಸಭಾ ಅಧ್ಯಕ್ಷ ಅಫ್ಸರ್ ಪಾಷಾ, ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಜಯರಾಮರೆಡ್ಡಿ, ಕೊಟ್ಟಿಗೆರೆ ಮಂಜುನಾಥ್ ಹಾಜರಿದ್ದರು.
ದೇವೇಗೌಡರ ಫೋಟೊ ಹಿಡಿದು ಬರುವವರನ್ನು ನಂಬಬೇಡಿ. ಹಣ ಚೆಲ್ಲಿ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿನ ಬಂಡಾಯಕ್ಕೆ ಲಕ್ಷ್ಯ ಕೊಡಬೇಡಿ. ಈ ಕಾರ್ಯಕ್ರಮಕ್ಕೆ ಜನರು ಬರದಂತೆ ಕೆಲವರು ಪ್ರಯತ್ನ ನಡೆಸಿದ್ದು ತಿಳಿದಿದೆ. ಟ್ರಸ್ಟ್ ಹೆಸರಿನಲ್ಲಿ ದೇವಸ್ಥಾನಗಳಿಗೆ ಕಳುಹಿಸುವುದು, ಉಡುಗೊರೆ ಹಂಚುವುದು ಮಾಡುತ್ತಿದ್ದಾರೆ ಎಂದು ರವಿಕುಮಾರ್ ಹೆಸರು ಹೇಳದೆಯೇ ಕುಮಾರಸ್ವಾಮಿ ಟೀಕಿಸಿದರು.ದೇವೇಗೌಡರ ಹೆಸರು ಹೇಳಿಕೊಂಡು ಪಕ್ಷೇತರರಾಗಿ ಚುನಾವಣೆಯಲ್ಲಿ ನಿಲ್ಲುತ್ತಿರುವವರ ಮಾತನ್ನು ನಂಬದಿರಿ. ಶಾಸಕ ರಾಜಣ್ಣ ಅವರನ್ನು ಬೆಂಬಲಿಸಿ. ವಿರೋಧ ಪಕ್ಷದಲ್ಲಿದ್ದರೂ ಶಕ್ತಿ ಮೀರಿ ರಾಜಣ್ಣ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ ಎಂದರು.‘ಮುನಿಶಾಮಪ್ಪ ಅವರು ನನಗೆ ತಂದೆ ಸಮಾನರು. ಒಂದು ಕಾಲದಲ್ಲಿ ಅವರನ್ನು ದಾರಿ ತಪ್ಪಿಸಿದ್ದವರೇ ಈಗ ಬಂಡಾಯ ಎದ್ದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ನನಗೆ ಶಕ್ತಿ ತುಂಬಲು ರಾಜಣ್ಣ ಅವರನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು.
**
ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸು ವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಈಗ ಕೊಳಚೆ ನೀರು ಶುದ್ಧೀಕರಿಸಿ ಕೊಡಲು ಮುಂದಾಗಿದೆ – ಎಚ್.ಡಿ.ಕುಮಾರಸ್ವಾಮಿ,ಜೆಡಿಎಸ್ ಅಧ್ಯಕ್ಷ.
**
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.