ADVERTISEMENT

ಮಿಂಚಿನ ನೋಂದಣಿಗೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 6:58 IST
Last Updated 9 ಏಪ್ರಿಲ್ 2018, 6:58 IST
ನಗರದ ಸರ್ಕಾರಿ ಜೂನಿಯರ್‌ ಕಾಲೇಜಿನ ಆವರಣದಲ್ಲಿ ‘ಮಿಂಚಿನ ನೋಂದಣಿ’ ಅಭಿಯಾನದಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುತ್ತಿರುವುದು.
ನಗರದ ಸರ್ಕಾರಿ ಜೂನಿಯರ್‌ ಕಾಲೇಜಿನ ಆವರಣದಲ್ಲಿ ‘ಮಿಂಚಿನ ನೋಂದಣಿ’ ಅಭಿಯಾನದಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುತ್ತಿರುವುದು.   

ಚಿಕ್ಕಬಳ್ಳಾಪುರ: ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಸೇರ್ಪಡೆಗೆ ಚುನಾವಣಾ ಆಯೋಗ ಭಾನುವಾರ ಹಮ್ಮಿಕೊಂಡಿದ್ದ ‘ಮಿಂಚಿನ ನೋಂದಣಿ’ ಎಂಬ ವಿಶೇಷ ಅಭಿಯಾನಕ್ಕೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ 1,255 ಮತಗಟ್ಟೆಗಳಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೂತ್‌ ಮಟ್ಟದ ಅಧಿಕಾರಿಗಳು ಮತಗಟ್ಟೆಯಲ್ಲೇ ಅರ್ಹ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಸಹಾಯ ನೀಡಲಿದ್ದಾರೆ’ ಎಂದು ತಿಳಿಸಿದರು.

‘18 ವಯಸ್ಸು ದಾಟಿದ ಮತದಾರರು, ಪಟ್ಟಿಯಲ್ಲಿ ಹೆಸರು ನೋಂದಾಯಿಸಿದವರು ತಮ್ಮ ಮನೆಯ ಸಮೀಪದಲ್ಲಿಯೇ ಇರುವ ಮತಗಟ್ಟೆಗೆ ಹೋಗಿ ಸುಲಭವಾಗಿ ಹೆಸರು ಸೇರಿಸಿ ಮತದಾನದ ಗುರುತಿನ ಚೀಟಿ ಪಡೆಯಬೇಕು. ಏಪ್ರಿಲ್‌ 14 ರವರೆಗೆ ಈ ಅವಕಾಶ ಕಲ್ಪಿಸಲಾಗಿದೆ. ಮತದಾರರು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ಅರ್ಹ ಅಭ್ಯರ್ಥಿಗೆ ಮತದಾನ ಮಾಡುವ ಮೂಲಕ ದೇಶದ ಪ್ರಗತಿಗೆ ಕೈ ಜೋಡಿಸಬೇಕು’ ಎಂದು ಹೇಳಿದರು.

ADVERTISEMENT

‘ಅರ್ಹರು ಮತದಾರರ ಪಟ್ಟಿಗೆ ಹೆಸರು ಸೇರಿಸಿದಾಗ ಮಾತ್ರ ಕಾನೂನು ಬದ್ಧವಾಗಿ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ ಹಾಕಿ ಉತ್ತಮ ಸರ್ಕಾರ ರಚಿಸಬಹುದು. ಮತದಾನಕ್ಕೆ ಅರ್ಹರಾದವರೂ ಮತದಾರರ ಪಟ್ಟಿಗೆ ಸೇರಿಸದಿದ್ದರೆ ದೇಶಕ್ಕೆ ಮಾಡುವ ದ್ರೋಹ. ನನ್ನ ಜೀವನದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇನೆ. ಮತ ಚಲಾಯಿಸುವ ಮೂಲಕ ನನ್ನ ಹಕ್ಕನ್ನು ನಿರೂಪಿಸುತ್ತೇನೆ’ ಎಂದು ಹೊಸದಾಗಿ ಸೇರ್ಪಡೆಗೊಂಡ ದೊಡ್ಡ ಭಜನೆ ರಸ್ತೆಯ ನಿವಾಸಿ ವಿದ್ಯಾರ್ಥಿನಿ ಡಿ.ದಿವ್ಯಾ ತಿಳಿಸಿದರು.

ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ನಗರಸಭೆಯ ಆಯುಕ್ತ ಉಮಾಕಾಂತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.