ADVERTISEMENT

ರಾಜಕೀಯ ಪ್ರಕ್ರಿಯೆ: ಪೆನಮಲೆ ಶಾಲೆಯಲ್ಲಿ ಚುನಾವಣೆ ರಂಗು

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 5:52 IST
Last Updated 18 ಜುಲೈ 2017, 5:52 IST

ಬಾಗೇಪಲ್ಲಿ: ಶಾಲಾ ಸಮಯದಲ್ಲಿ ಆಟ, ಪಾಠಗಳಲ್ಲಿ ನಿರತರಾಗಿರುತ್ತಿದ್ದ ಮಕ್ಕಳು ಸೋಮವಾರ ಮತದಾರರಾಗಿ ಬದಲಾಗಿದ್ದರು. ಚುನಾವಣೆ ಮತಗಟ್ಟೆ ಎದುರು ಹಕ್ಕು ಚಲಾಯಿಸಲು ಸಾಲುಗಟ್ಟಿ ನಿಂತು ಸಂಭ್ರಮಿಸಿದರು. ಇಡೀ ಶಾಲಾ ಆವರಣ ರಾಜಕೀಯ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿತ್ತು.

ಪೆನಮಲೆ ಶಾಲೆ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ಸಂಸತ್ ಚುನಾವಣೆಗೆ ಮತದಾನದ ಸಂದರ್ಭದಲ್ಲಿ ಕಂಡು ಬಂದ ವಾತಾವರಣ. ಮತದಾನ ಪ್ರತಿಯೊಬ್ಬರ ಹಕ್ಕು ಎಂಬುದನ್ನು ಮಕ್ಕಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಚುನಾವಣೆ ನಡೆಸಲಾಗಿತ್ತು.

ಚುನಾವಣೆಯಲ್ಲಿ ಶಾಲಾ ಮಾಧವಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ನಂತರ ಪ್ರಮಾಣ ವಚನ ಸ್ವೀಕರಿಸಿ, ‘ಶಾಲೆಯ ಸಮಗ್ರ ಬೆಳವಣಿಗೆ, ಸ್ವಚ್ಛತೆ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ADVERTISEMENT

5 ಸ್ಥಾನಗಳ ಬೆಂಬಲದೊಂದಿಗೆ ಹರೀಶ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. ಆಡಳಿತ ಪಕ್ಷವು ಹತ್ತು ಸ್ಥಾನ ಗಳಿಸಿತು. ಸಚಿವ ಸಂಪುಟದಲ್ಲಿ ಅಕ್ಷರ ದಾಸೋಹ- ವರಲಕ್ಷಿ, ಶಿಕ್ಷಣ- ರಾಧಾ, ಕ್ರೀಡೆ- ರಾಜು, ಸಾಂಸ್ಕೃತಿಕ- ನರೇಂದ್ರ, ಆರೋಗ್ಯ-ಎಂ.ಎನ್. ವೆಂಕಟೇಶ್, ಕ್ಷೀರಭಾಗ್ಯ-ಸಂಧ್ಯಾ, ಸ್ವಚ್ಛತೆ-ರಮ್ಯಾ, ಗೃಹಮಂತ್ರಿ- ಮೋಹನ್, ಮಾನವ ಸಂಪನ್ಮೂಲ-ವರ್ಷಿತ್, ಕಾನೂನು ಸಚಿವರಾಗಿ-ವಿಷ್ಣುವರ್ಧನ್ ನೇಮಕವಾದರು. ರಾಷ್ಟ್ರಪತಿ ಚಂದ್ರಿಯಾ ಅವರು ಸಂಪುಟ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಚುನಾವಣೆ ಕುರಿತು ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಮಾತನಾಡಿ, ಸಂವಿಧಾನದಲ್ಲಿ ಚುನಾವಣೆಗೆ ಇರುವ ಮಹತ್ವ ವಿವರಿಸಿದರು. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ಪಾತ್ರ, ಮೌಲ್ಯಗಳ ಅರಿವು ಮೂಡಿಸಿ ರಾಜಕೀಯ ಪ್ರಜ್ಞೆ ಬೆಳೆಸಲು ಚುನಾವಣೆ ಸಹಾಯಕ ಎಂದರು. ಶಿಕ್ಷಕರಾದ ವೈ.ಎಂ. ಮಂಜುನಾಥ, ಬಿ.ಎ.ವಾಣಿ, ಸಾವಿತ್ರಮ್ಮ, ನಾಗಾರ್ಜುನ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.