ADVERTISEMENT

ವಂಚನೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 4:52 IST
Last Updated 14 ಏಪ್ರಿಲ್ 2017, 4:52 IST

ಚಿಂತಾಮಣಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ವಂಚನೆಯ ವಿರುದ್ಧ ತಾಲ್ಲೂಕು ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ರೈತರ ಪರವಾಗಿ ಹಾಗೂ ಎಪಿಎಂಸಿಯಲ್ಲಿ ನಡೆಯುತ್ತಿರುವ ವಂಚನೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

‘ರೈತರು ಹಲವಾರು ಕಷ್ಟ ನಷ್ಟಗಳ ನಡುವೆ ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದರೆ, ಕಾರ್ಮಿಕರು ರೈತರನ್ನು ಕೇಳದೆ ಗೇಟಿನಲ್ಲೇ ಮೂಟೆಗಳನ್ನು ಹೊತ್ತುಕೊಂಡು ಅವರಿಗೆ ಇಷ್ಟಬಂದ ಮಂಡಿಗಳಲ್ಲಿ ಹಾಕುತ್ತಾರೆ. ಪ್ರಶ್ನೆ ಮಾಡಿದ ರೈತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸುತ್ತಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಕಮೀಷನ್ ಮಂಡಿಗಳಲ್ಲಿ ತೂಕದಲ್ಲೂ ಮೋಸ ಮಾಡುತ್ತಾರೆ. 20 ರಿಂದ 30 ಕೆ.ಜಿ ಉತ್ಪನ್ನಗಳನ್ನು ದೌರ್ಜನ್ಯದಿಂದ ಕಿತ್ತುಕೊಂಡು ಹೋಗುತ್ತಾರೆ. ಪ್ರಶ್ನೆ ಮಾಡಿದವರ ಮೇಲೆ ಮಾಲೀಕರು ಮತ್ತು ಕಾರ್ಮಿಕರು ಸೇರಿಕೊಂಡು ಹಲ್ಲೆ ಮಾಡುತ್ತಾರೆ’ ಎಂದು ದೂರಿದರು.

‘ಕಳೆದ ವಾರ ಹುಣಸೆಹಣ್ಣಿನ ಮಾರುಕಟ್ಟೆಯಲ್ಲಿ ಹರಾಜಿಗೆ ತಂದಿದ್ದ ಹುಣಸೆ ಹಣ್ಣಿನಲ್ಲಿ 20 ಕೆ.ಜಿ ಹುಣಸೆ ಹಣ್ಣನ್ನು ತೆಗೆದುಕೊಳ್ಳುತ್ತಿರುವುದನ್ನು ವಿರೋಧಿಸಿದ ರೈತನ ಮೇಲೆ ಹಲ್ಲೆ ನಡೆಸಲಾಗಿದೆ. ಮಾರುಕಟ್ಟೆ ಸಮಿತಿ ಅಧ್ಯಕ್ಷರು, ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಈ ರೀತಿಯ ಅನ್ಯಾಯ, ಅವ್ಯವಹಾರಗಳನ್ನು ತಡೆಗಟ್ಟಬೇಕು. ಕ್ರಮ ಕೈಗೊಳ್ಳದೆ ಇದೇ ರೀತಿ ಮುಂದುವರಿದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಮನವಿ ಸಲ್ಲಿಕೆ: ರೈತ ಭವನವನ್ನು ರೈತರಿಗೆ ನೀಡುವುದು, ಶೌಚಾಲಯಗಳನ್ನು ನಿರ್ಮಿಸುವುದು, ಎಟಿಎಂ ಕೇಂದ್ರ ತೆರೆಯುವುದು, ರೈತರಿಂದ ಕಮೀಷನ್ ಪಡೆಯುವುದನ್ನು ನಿಲ್ಲಿಸುವುದು, ಜಾಕ್‌ಪಾಟ್‌ಗೆ ಕಡಿವಾಣ ಹಾಕುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಅಧ್ಯಕ್ಷರಿಗೆ ಸಲ್ಲಿಸಲಾಯಿತು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ವಿ.ರಮೇಶಬಾಬು, ಮುಖಂಡರಾದ ವಿ.ಚಲಪತಿ, ಆರ್.ಶಿವಾನಂದರೆಡ್ಡಿ, ಎಚ್.ಎಂ.ಕದಿರೇಗೌಡ, ರೆಡ್ಡಪ್ಪ, ಬಿ.ಎಂ.ವೆಂಕಟೇಶ್, ಪಾರ್ವತಮ್ಮ, ಎನ್.ವಿ.ಶಿವಾರೆಡ್ಡಿ, ಶಾಂತಕುಮಾರ್, ರವಿಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.