ಚಿಂತಾಮಣಿ: ದೃಢ ನಿರ್ಧಾರ ಮಾಡಿದರೆ ಮಾತ್ರ ಮದ್ಯವ್ಯಸನದಿಂದ ಮುಕ್ತಿ ಹೊಂದಲು ಸಾಧ್ಯ. ಗಟ್ಟಿ ಮನಸ್ಸು ಮಾಡಿ, ಮದ್ಯವ್ಯಸನದಿಂದ ಹೊರಬಂದು ಉತ್ತಮ ಆರೋಗ್ಯವನ್ನು ಹೊಂದಿರಿ ಎಂದು ಹಿರಿಯ ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಮದ್ಯವ್ಯಸನಿಗಳಿಗೆ ಕಿವಿಮಾತು ಹೇಳಿದರು.
ಕೈವಾರದ ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿರುವ ಮದ್ಯವರ್ಜನ ಶಿಬಿರದಲ್ಲಿ ಗುರು ವಾರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಹಾತ್ಮ ಗಾಂಧಿಜೀ ದೂರದೃಷ್ಟಿ ಯಿಂದ ಮದ್ಯಪಾನ ನಿಷೇಧವನ್ನು ಜಾರಿಗೆ ತರಬೇಕು ಎಂದು ಪ್ರತಿಪಾದಿಸಿದ್ದರು.ಮದ್ಯಪಾನದ ವ್ಯಸನದಿಂದ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಅಲ್ಪ ಸಂತೋಷಕ್ಕಾಗಿ ಮದ್ಯಪಾನ ಚಟಕ್ಕೆ ಬಲಿಯಾದ ವ್ಯಕ್ತಿ ತಾನು ಹಾಳಾಗುವುದರ ಜತೆಗೆ ಕುಟುಂಬವನ್ನು ಹಾಳು ಮಾಡುತ್ತಾನೆ. ಪತ್ನಿ ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಾರೆ. ಸಮಾಜದಲ್ಲಿ ಗೌರವನ್ನೂ ಕಳೆದುಕೊಳ್ಳುತ್ತಾನೆ ಎಂದು ತಿಳಿಸಿದರು.
ಮದ್ಯ ವ್ಯಸನದಿಂದ ಶರೀರದಲ್ಲಿ ಶಕ್ತಿ ಕುಂದುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕೆಡುತ್ತದೆ. ವರ್ತನೆಯಲ್ಲಿ ಬದಲಾವಣೆ ಕಂಡು ಬಂದು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗುತ್ತಾನೆ. ಶರೀರದ ಮೇಲೆ ನಿಯಂತ್ರಣ ಕಳೆದುಕೊಂಡು ಖಿನ್ನತೆ, ಆತಂಕ, ಏಕಾಂಗಿತನ ಅನುಭವಿಸಬೇಕಾಗುತ್ತದೆ. ವಿವಿಧ ಕಾಯಿಲೆಗಳಿಗೆ ತುತ್ತಾಗ ಬೇಕಾಗುತ್ತದೆ ಎಂದರು.
ಜೀವನದಲ್ಲಿ ಕಷ್ಟ–ಸುಖ ಸಾಮಾನ್ಯ, ಸುಖ ಬಂದಾಗ ಸಂತೋಷಕ್ಕೆ ಕಷ್ಟ ಬಂದಾಗ ದುಃಖ ಕಡಿಮೆ ಮಾಡಿಕೊಳ್ಳಲು ಕುಡಿತವನ್ನು ಪ್ರಾರಂಭಿಸುತ್ತಾರೆ. ಮುಂದೆ ಅದು ಚಟವಾಗಿ ಮಾರ್ಪಾಡಾಗುತ್ತದೆ. ಇದು ಸ್ವಯಂಕೃತ ಅಪರಾಧ. ಶಿಬಿರದಲ್ಲಿ ನೀಡುವ ಮಾರ್ಗದರ್ಶನದಂತೆ ಜೀವನ ನಡೆಸಿದರೆ ಸಂತೋಷ ಪಡೆಯಬಹುದು ಎಂದು ನುಡಿದರು.
ಶಿಬಿರಾಧಿಕಾರಿ ನಾಗೇಶ್, ಮರುಳೇಶ್, ಜಿ.ಅಮರನಾಥ್, ಜಿ.ಎ.ಬಾಲಾಜಿ, ಗೋವಿಂದೆಡ್ಡಿ, ಕುಪೇಂದ್ರಪ್ಪ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.